ರೆಡ್ಡಿ ಮಂಗಳವಾರ ಸ್ಫೋಟಕ ಸುದ್ದಿ ನೀಡಲಿದ್ದಾರಂತೆ!
ಏನದು ಸ್ಫೋಟಕ ಸುದ್ದಿ? ಈ ಸ್ಫೋಟದಿಂದ ಯಾರ ರಾಜಕೀಯ ಜೀವನದಲ್ಲಿ ಆಘಾತ ಸಂಭವಿಸಲಿದೆ? ಇದನ್ನು ತಿಳಿಯಲು ಮಂಗಳವಾರದವರಗೆ ಕಾಯಬೇಕು. ಜನಾರ್ದನ ರೆಡ್ಡಿಯವರು ಮಂಗಳವಾರ ಪತ್ರಿಕಾಗೋಷ್ಠಿ ಕರೆದು ಈ ಸುದ್ದಿಯನ್ನು ಸ್ಫೋಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಂದು ನಡೆಸಬೇಕಾಗಿದ್ದ ಪತ್ರಿಕಾಗೋಷ್ಠಿಯನ್ನು ಹಠಾತ್ತಾಗಿ ರದ್ದುಗೊಳಿಸಿ ಮುಂಗಳವಾರ ಮುಂದೂಡಿದ್ದಾರೆ ರೆಡ್ಡಿ.
ಈ ವಿಷಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜನಾರ್ದನ ರೆಡ್ಡಿಯವರು, "ನಮಗೆ ಲೋಕಾಯುಕ್ತ ವರದಿ ಸಂಪೂರ್ಣವಾಗಿ ಸಿಕ್ಕಿಲ್ಲ. ಸೋಮವಾರ ಸಿಕ್ಕಮೇಲೆ ಅಧ್ಯಯನ ನಡೆಸಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿತ್ತೇವೆ" ಎಂದು ಯಾವುದನ್ನೂ ಸ್ಪಷ್ಟವಾಗಿ ನುಡಿಯದೆ ಸಸ್ಪೆನ್ಸ್ ಬಿಲ್ಡಪ್ ಮಾಡಿದ್ದಾರೆ.
ಯಡಿಯೂರಪ್ಪ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜನಾರ್ದನ ರೆಡ್ಡಿ, ಅವರೊಬ್ಬ ಧೀಮಂತ ನಾಯಕ. ಅವರ ಬಗ್ಗೆ ಹೃದಯತುಂಬಿದ ಪ್ರೀತಿ, ಅಭಿಮಾನವಿದೆ. ಅವರು ನಾಯಕಾಗಿ ಇರಲಿ, ಇಲ್ಲದಿರಲಿ ಅವರ ಬಗ್ಗೆ ಗೌರವ ಯಾವತ್ತೂ ಇರುತ್ತದೆ. ವರಿಷ್ಠರ ಅಣತಿಯಂತೆ ಅವರು ನಡೆದುಕೊಳ್ಳುತ್ತಾರೆಂಬ ಭರವಸೆಯಿದೆ ಎಂದು ನುಡಿದರು.