ಯಡ್ಡಿ ಹೊಸ ಪಕ್ಷ ಸ್ಥಾಪನೆ, ಗಾಳಿಸುದ್ದಿಗೆ ಮತ್ತೆ ಜೀವ
ರಾಜೀನಾಮೆ ನೀಡದೆ ವಿಧಾನಸಭೆ ವಿಸರ್ಜಿಸುವ ಯಡಿಯೂರಪ್ಪ ಅವರ ಪ್ರಯತ್ನಕ್ಕೆ ಹೈಕಮಾಂಡ್ ಅಡ್ಡಗಾಲು ಹಾಕಿದೆ. ಈ ಮಧ್ಯೆ ಕಳೆದ ಮಾರ್ಚ್ ತಿಂಗಳಿಂದ ಹರಿದಾಡುತ್ತಿದ್ದ ಗಾಳಿಸುದ್ದಿ ಆಷಾಢದ ಗಾಳಿ ಸೋಕಿ ಕೊನೆ ಗಳಿಗೆಯಲ್ಲಿ ಮತ್ತೆ ಜೀವ ಸಿಕ್ಕಿದೆ.
ಆದರೆ, ಈ ಬಾರಿ ಉದ್ಯಮಿ ಅಶೋಕ್ ಖೇಣಿ ಬದಲಿಗೆ ಬಂಡವಾಳ ಹೂಡಿಕೆಯ ಜವಾಬ್ದಾರಿಯನ್ನು ರೆಡ್ಡಿ ಸೋದರರು ವಹಿಸುವ ಸಾಧ್ಯತೆಯಿದೆ. ಪಕ್ಷದ ಹೆಸರು ಕರ್ನಾಟಕ ಮಕ್ಕಳ ಪಕ್ಷ ಅಥವಾ ಕನ್ನಡ ಮಕ್ಕಳ ಪಕ್ಷ ಎಂದಾಗಲಿದೆ. ಹೊಸ ಪ್ರಾದೇಶಿಕ ಪಕ್ಷದ ನೋಂದಾವಣೆ ಕಾರ್ಯದ ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಆದರೆ, ಹೊಸ ಪಕ್ಷ ಸ್ಥಾಪನೆ, ಯಡಿಯೂರಪ್ಪ ಅವರ ಕೊನೆ ಆಯ್ಕೆ ಎನ್ನಲಾಗಿದೆ. ತಮ್ಮ ಷರತ್ತುಗಳಿಗೆ ಹೈಕಮಾಂಡ್ ಒಪ್ಪಿದರೆ ಪಕ್ಷ ಕಟ್ಟುವ ಯೋಚನೆಯನ್ನು ಕೈಬಿಡುವ ಸಾಧ್ಯತೆಯಿದೆ. ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 50 ಸೀಟು ಗೆಲ್ಲುವುದು ಯಡಿಯೂರಪ್ಪ ಅವರ ಗುರಿ.
ಒಂದು ವೇಳೆ ಯಡಿಯೂರಪ್ಪ ಅವರು ಬಿಜೆಪಿ ಒಡೆದರೆ, ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗುತ್ತದೆ. ಪ್ರಭಾವಿ ಲಿಂಗಾಯತ ನಾಯಕ ಯಡಿಯೂರಪ್ಪ ಅವರು ಹೊಸ ಪತ್ರಿಕೆ, ಟಿವಿ ವಾಹಿನಿ ಅಥವಾ ಪಕ್ಷ ಕಟ್ಟಿದರೂ ಬಿಜೆಪಿಗೆ ಪೂರಕವಾಗೇ ಇರುವಂತೆ ನೋಡಿಕೊಳ್ಳಲು ಹೈಕಮಾಂಡ್ ಶತ ಪ್ರಯತ್ನ ನಡೆಸಿದೆ ಎಂಬ ಸುದ್ದಿಯಿದೆ.