ಭ್ರಷ್ಟ 'ಲೋಕೋಪಯೋಗಿ' ಮೃತ್ಯುಂಜಯ ಸ್ವಾಮಿ ಬಂಧನ

ಶುಕ್ರವಾರ ಬೆಳಿಗ್ಗೆ ಮೃತ್ಯುಂಜಯ ಸ್ವಾಮಿ ಸೇರಿದಂತೆ ರಾಜ್ಯದ ನಾನಾ ಕಡೆ ಒಟ್ಟು ಎಂಟು ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆದಿದ್ದರು. ಶನಿವಾರವೂ ಸ್ವಾಮಿಗೆ ಸೇರಿದ ಮತ್ತಷ್ಟು ಆಸ್ತಿ ವಶಪಡಿಸಿಕೊಂಡಿದ್ದಾರೆ. ಜತೆಗೆ ಮೈಸೂರಿನಲ್ಲಿಯೂ ಒಂದು ಮನೆ ಹೊಂದಿರುವುದು ಲೋಕಾಯುಕ್ತರ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಮೃತ್ಯುಂಜಯಸ್ವಾಮಿ ಒಟ್ಟು ಅಕ್ರಮ ಆಸ್ತಿ ಮೌಲ್ಯ ಈಗ ಆರು ಕೋಟಿ ದಾಟಿದೆ.
ತನಿಖೆಯ ನೇತೃತ್ವ ವಹಿಸಿರುವ ಡಿವೈಎಸ್ಪಿಗಳಾದ ಎಸ್.ಗಿರೀಶ್ ಮತ್ತು ಎಚ್.ಎಸ್.ಮಂಜುನಾಥ್ ಶನಿವಾರ ಬೆಳಿಗ್ಗೆಯೇ ಆರೋಪಿ ಅಧಿಕಾರಿಯ ಬನಶಂಕರಿ ಎರಡನೇ ಹಂತದಲ್ಲಿರುವ ಮನೆ ತಪಾಸಣೆ ಅರಂಭಿಸಿದ್ದರು. ನವೀಕರಣಗೊಳ್ಳುತ್ತಿರುವ ಮನೆಯ ಒಂದು ಕೊಠಡಿಯಲ್ಲಿ 90 ಕೆ.ಜಿ.ಯಷ್ಟು ಶ್ರೀಗಂಧವನ್ನು ಪರವಾನಗಿ ಇಲ್ಲದೇ ದಾಸ್ತಾನು ಇಟ್ಟಿರುವುದು ಈ ಸಂದರ್ಭದಲ್ಲಿ ಪತ್ತೆಯಾಗಿದೆ.
ಮನೆಯ ಬಾಗಿಲು ತಯಾರಿಸುವಾಗ ಬಳಸುವ ಉದ್ದೇಶದಿಂದ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಇಟ್ಟಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ನ್ಯಾಯಾಲಯಕ್ಕೆ ಮಹಜರು ವರದಿಯನ್ನು ಹಾಜರುಪಡಿಸಿದ ಬಳಿಕ, ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿ ಪ್ರತ್ಯೇಕ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಜಯನಗರದ ಸೌತ್ ಎಂಡ್ ವೃತ್ತದಲ್ಲಿರುವ ರೂ 3.16 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣ, ಚಾಮರಾಜಪೇಟೆಯಲ್ಲಿರುವ ರೂ 1.07 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣ ಸೇರಿದಂತೆ ಹಲವು ಆಸ್ತಿಗಳ ವಿವರನ್ನು ಮೃತ್ಯುಂಜಯಸ್ವಾಮಿ ಸರ್ಕಾರಕ್ಕೆ ನೀಡಿದ್ದ ಆಸ್ತಿ ವಿವರ ಪ್ರಮಾಣ ಪತ್ರದಲ್ಲಿ ನಮೂದಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡಲಿಲ್ಲ.
ಮೃತ್ಯುಂಜಯಸ್ವಾಮಿ 1986ರಲ್ಲಿ ಕೆಎಸ್ಆರ್ ಸಿಟಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸರಕಾರಿ ಹುದ್ದೆಗೆ ಸೇರಿಕೊಂಡಿದ್ದರು. ನಂತರ 1992ರಲ್ಲಿ ಲೋಕೋಪಯೋಗಿ ಇಲಾಖೆಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಭಡ್ತಿ ಪಡೆದುಕೊಂಡಿದರು.












Click it and Unblock the Notifications