ಫೋನ್ ಕದ್ದಾಲಿಕೆಯ ಮುಂದೆ ವೀಕ್ ಆದ ಲೀಕ್

ಟೆಲಿಫೋನ್ ಕದ್ದಾಲಿಕೆಯ ದೋಷಾರೋಪವನ್ನು ಒಬ್ಬರ ಮೇಲೊಬ್ಬರು ಹೊರಿಸುತ್ತಿದ್ದು, ಪರಸ್ಪರ ಕೆಸರೆರಚುವಿಕೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಬಿಜೆಪಿ ಪಕ್ಷದ ಮೇಲೆ ಕದ್ದಾಲಿಕೆಯ ಆರೋಪ ಹೊರಿಸಿದ್ದರೆ, ಬಿಜೆಪಿ ಕಾಂಗ್ರೆಸ್ ನತ್ತ ಬೊಟ್ಟು ತೋರಿಸುತ್ತಿದೆ.
ಕುಮಾರಸ್ವಾಮಿ ಆರೋಪ : ಬಿಜೆಪಿ ಸರಕಾರ ಬಂದಾಗಿನಿಂದ ತಮ್ಮ ಟೆಲಿಫೋನ್ ಮತ್ತು ಮೊಬೈಲುಗಳನ್ನು ಬಿಜೆಪಿ ಟ್ಯಾಪ್ ಮಾಡಿದೆ ಎಂದು ಅಕ್ರಮ ಗಣಿಗಾರಿಕೆ ಪಟ್ಟಿಯಲ್ಲಿ ಯಡಿಯೂರಪ್ಪ ಪಕ್ಕದಲ್ಲೇ ಇರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದ ಮೇರೆಯೇ ನನ್ನ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ. ಈ ಕಾರಣಕ್ಕಾಗಿ ಮತ್ತು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಅವರು ಕೂಡಲೆ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಎರಡು ಕಂಪನಿಗಳಿಗೆ ಗಣಿಗಾರಿಕೆ ಪರವಾನಗಿ ನೀಡಿದ ಆರೋಪ ಅವರು ಎದುರಿಸುತ್ತಿದ್ದಾರೆ. ಸಂಬಂಧಿತ ಎಲ್ಲ ಇಲಾಖೆಗಳಿಂದ ಎಲ್ಲ ದಾಖಲೆಗಳು ಸಾಗಿಬಂದ ನಂತರವೆ ಪರವಾನಗಿ ನೀಡಲಾಗಿದೆ ಎಂಬುದು ಕುಮಾರಸ್ವಾಮಿಯವರ ರಕ್ಷಣಾತ್ಮಕ ಹೇಳಿಕೆ.
ಕಾಂಗ್ರೆಸ್ ಪ್ರತಿಭಟನೆ : ದೂರವಾಣಿ ಕದ್ದಾಲಿಕೆಯನ್ನು ಪ್ರಮುಖ ಅಸ್ತ್ರವಾಗಿಸಿಕೊಂಡು ಬಿಎಸ್ ಯಡಿಯೂರಪ್ಪನವರ ರಾಜೀನಾಮೆಗೆ ಪಟ್ಟುಹಿಡಿದಿರುವ ಕಾಂಗ್ರೆಸ್ ಇಂದು ನಗರದ ಸ್ವಾತಂತ್ರ್ಯ ಉದ್ಯಾನದ ಎದಿರು ಪ್ರತಿಭಟನೆ ನಡೆಸಿತು.
ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂತಾದವರು ಗುಂಪುಗೂಡಿ ಬಿಜೆಪಿ ಮತ್ತು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವೇ ಹೊತ್ತು ಪ್ರತಿಭಟನೆ ನಡೆಸಿ ತಮ್ಮ ಹಾದಿ ಹಿಡಿದರು. [ಅಕ್ರಮ ಗಣಿಗಾರಿಕೆ ಸೋರಿಕೆ : ಧೂಳು ಮಣ್ಣು]











Click it and Unblock the Notifications