Get Updates
Get notified of breaking news, exclusive insights, and must-see stories!

ಕೋಲಾರ ನ್ಯಾಯಾಧೀಶ ನರಹರಿ ಸೇವೆಯಿಂದ ಮುಕ್ತ ಮುಕ್ತ

Kolar Judge G. Narahari lose job
ಬೆಂಗಳೂರು, ಜುಲೈ 20: ನ್ಯಾಯ ವಿತರಣೆ ಕಾರ್ಯದಲ್ಲಿ ತೊಡಗದೆ ನ್ಯಾಯಾಧೀಶರೊಬ್ಬರು ನ್ಯಾಯಾಲಯದ ಅವಧಿಯಲ್ಲಿ ವಿಪರೀತ ದೂರವಾಣಿ ಕರೆ ಮಾಡಿ, ಕೆಲಸ ಕಳೆದುಕೊಂಡ ಪ್ರಕರಣ ನಡೆದಿದೆ.

ಕೋಲಾರದಿಂದ ಬೆಳಗಾವಿಗೆ ವರ್ಗಾವಣೆಗೊಂಡರೂ ಕಚೇರಿಯ ದೂರವಾಣಿ ಬಳಸಿ ತಿಂಗಳೊಂದಕ್ಕೆ ಸಾವಿರಾರು ಬಾರಿ ಕರೆ ಮಾಡುವುದನ್ನು ಮುಂದುವರಿಸಿದ್ದ ನ್ಯಾಯಾಧೀಶ ಜಿ.ನರಹರಿ ಅವರನ್ನು ಸೇವೆಯಿಂದ ಅಮಾನತು ಮಾಡಿ ರಾಜ್ಯಪಾಲರು ಮೊನ್ನೆ ಆದೇಶಿಸಿದ್ದಾರೆ. ಈ ಆದೇಶವನ್ನು ಜುಲೈ 14ರಂದು ಗೆಜೆಟ್ ನಲ್ಲೂ ಪ್ರಕಟಿಸಲಾಗಿದೆ.

ಕೋಲಾರದಲ್ಲಿ ತಮ್ಮ ಅಧೀನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆರಳಚ್ಚುಗಾರ್ತಿ ಪ್ರಿಯಮಣಿ (ಹೆಸರು ಬದಲಾಗಿದೆ) ಅವರೊಂದಿಗೆ ಮಾತನಾಡಿದ್ದೇ ಅವರಿಗೆ ಈಗ ಮುಳುವಾಗಿದೆ. ಇವರ ವಿರುದ್ಧ ಹೈಕೋರ್ಟ್‌ನಿಂದ ನಡೆದ ತನಿಖೆಯಿಂದ ಕರೆಯ ಗುಟ್ಟು ರಟ್ಟಾಗಿದೆ. 1999ರಿಂದ ನಡೆದ ಕಚೇರಿಯಿಂದ ಕರೆ ವಿವಾದ ಈಗ ಸೇವೆಯಿಂದ ವಜಾಗೊಳ್ಳುವುದರೊಂದಿಗೆ ಮುಕ್ತಾಯಗೊಂಡಿದೆ.

ನರಹರಿ ಅವರು 1999ರ ಮೇ ತಿಂಗಳಿನಿಂದ 2000ರ ಮೇ ವರೆಗೆ ಕೋಲಾರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಪ್ರಿಯಮಣಿ ಅವರು ಅಲ್ಲಿಯೇ ಬೆರಳಚ್ಚುಗಾರ್ತಿಯಾಗಿದ್ದರು. 2002ರ ಮೇ 27ರಂದು ನರಹರಿಗೆ ಬೆಳಗಾವಿಗೆ ವರ್ಗಾವಣೆಯಾಯಿತು. ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಕೋಲಾರದಲ್ಲಿನ ಪ್ರಿಯಮಣಿ ಅವರ ದೂರವಾಣಿಗೆ ತಿಂಗಳೊಂದಕ್ಕೆ ಸುಮಾರು 600 ಹಾಗೂ ಅವರ ಸಹೋದರರ ಮನೆಯ ದೂರವಾಣಿಗೆ 57 ಬಾರಿ ಕರೆ ಮಾಡಿದ್ದರು! ನರಹರಿ ಅವರ ಕಚೇರಿ ಸಂಖ್ಯೆ 420500 ಪ್ರಿಯಮಣಿ ಕೋಲಾರ ಕಚೇರಿ ದೂರವಾಣಿ ಸಂಖ್ಯೆ 26981.

'ಕೋಲಾರ ಕೋರ್ಟ್‌ನ ಇತರ ಸಿಬ್ಬಂದಿಯ ಕುಶಲೋಪರಿ ತಿಳಿದುಕೊಳ್ಳಲು ಅವರ ಬಳಿ ಮಾತನಾಡಲು ಕರೆ ಮಾಡಿದ್ದೆನೇ ವಿನಾ ಪ್ರಿಯಮಣಿ ಅವರ ಜೊತೆಯಲ್ಲ'ಎನ್ನುವುದು ಈ ನ್ಯಾಯಾಧೀಶರ ಸ್ಪಷ್ಟನೆಯಾಗಿತ್ತು. ಆದರೆ ವಿಚಾರಣೆ ವೇಳೆ ಇದನ್ನು ಇತರ ಸಿಬ್ಬಂದಿ ಅಲ್ಲಗಳೆದಿದ್ದರು.

ಮಾತ್ರವಲ್ಲದೇ ಪ್ರಿಯಮಣಿ ಹೆರಿಗೆಗೆಂದು ರಜೆ ಹಾಕಿದ್ದ ಸಂದರ್ಭದಲ್ಲಿ ಕಚೇರಿಗೆ ಒಂದೂ ಕರೆ ಬಂದಿರಲಿಲ್ಲ, ಬದಲಿಗೆ ಅವರ ಸಹೋದರನ ಮನೆಗೆ ಕರೆ ಬಂದಿತ್ತು ಎನ್ನುವುದು ತನಿಖೆಯಿಂದ ಸಾಬೀತಾಯಿತು.

ಪ್ರಿಯಮಣಿ ಅವರ ಪತಿ, ಭಾವ ಹಾಗೂ ಮಾವ ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಲುಕಿದ್ದು, ಅದರ ವಿಚಾರಣೆಯನ್ನು ನರಹರಿಯವರೇ ನಡೆಸುತ್ತಿದ್ದರು. ಆರೋಪಿಗಳನ್ನು ಮನೆಗೆ ಕರೆಯುವಂತಿಲ್ಲ ಎಂಬ ಕಾನೂನು ಮೀರಿ, ಈ ಎಲ್ಲ ಆರೋಪಿಗಳನ್ನು ತಮ್ಮ ಮನೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಆಮಂತ್ರಣ ನೀಡಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಹೇಳಿಕೆಗಳನ್ನು ಪ್ರಿಯಮಣಿ ಅವರ ಕೈಬರಹದಲ್ಲಿಯೇ ಬರೆಸಿದ್ದರು. ಅಷ್ಟೇ ಅಲ್ಲದೇ ಸರಿಯಾದ ವಿಚಾರಣೆ ನಡೆಸದೆ ಎಲ್ಲರನ್ನೂ ಆರೋಪ ಮುಕ್ತರನ್ನಾಗಿಸಿರುವುದೂ ತನಿಖೆಯಿಂದ ಬಹಿರಂಗಗೊಂಡಿತು.

ಇಷ್ಟೇ ಅಲ್ಲದೇ, ಪ್ರಿಯಮಣಿಗೆ ಕೋರ್ಟ್ ಅವಧಿಯಲ್ಲಿಯೇ ಕಾಲೇಜೊಂದರಲ್ಲಿ ವ್ಯಾಸಂಗ ಮಾಡಲೂ ಇವರು ಅನುಮತಿ ನೀಡಿದ್ದರು. ಕೋರ್ಟ್‌ನಿಂದ ಸುಮಾರು 35 ಕಿ.ಮೀ. ದೂರ ಇರುವ ಕೆಜಿಎಫ್‌ನ ಕಾಲೇಜೊಂದಕ್ಕೆ ಪ್ರಿಯಮಣಿ ಹೋಗಿಬರುತ್ತಿದ್ದರು. ಆದರೆ ಅವರು ಎಲ್ಲಿ ಹೋಗಿ ಬರುತ್ತಿದ್ದಾರೆ ಎಂಬ ಬಗ್ಗೆ ತನಿಖೆಯ ವೇಳೆ ಮಾಹಿತಿ ನೀಡಲು ನರಹರಿ ವಿಫಲರಾಗಿದ್ದರು. ಪ್ರಿಯಮಣಿ ಜೊತೆ ಅನುಮಾನಾಸ್ಪದ ಸಂಬಂಧ ಇರುವ ಕಾರಣದಿಂದಲೇ ನರಹರಿಯವರು ಈ ರೀತಿ ಮಾಡಿದ್ದಾರೆ ಎಂದು ವಜಾ ಆದೇಶದಲ್ಲಿ ತಿಳಿಸಲಾಗಿದೆ.

ಹೈಕೋರ್ಟ್ ನಿಯಮದ ಅನ್ವಯ ನ್ಯಾಯಾಧೀಶರು ಯಾವುದೇ ದುಬಾರಿ ವಸ್ತು ಖರೀದಿ ಮಾಡುವ ಮುನ್ನ ಹೈಕೋರ್ಟ್ ಅನುಮತಿ ಪಡೆಯಬೇಕು ಇಲ್ಲವೇ ವಸ್ತು ಖರೀದಿಸಿದ ನಂತರ ಅದನ್ನು ಹೈಕೋರ್ಟ್ ಗಮನಕ್ಕೆ ತರಬೇಕು. ಆದರೆ 2004ರ ಅವಧಿಯಲ್ಲಿ ನರಹರಿಯವರು ಎರಡು ದುಬಾರಿ ಮೊಬೈಲ್ ಫೋನ್ ಖರೀದಿ ಮಾಡಿದ್ದರು. ಆದರೆ ಆ ಕುರಿತು ಹೈಕೋರ್ಟ್ ಗಮನಕ್ಕೆ ತಂದಿರಲಿಲ್ಲ.

ಎಲ್ಲಾ ಅಪಾದನೆ ಕುರಿತಾಗಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ಪರವಾಗಿ ಸಾಕ್ಷ್ಯ ಹೇಳುವಂತೆ ಮೊಬೈಲ್‌ನಿಂದ ಪ್ರಿಯಮಣಿ ಅವರಿಗೆ 71 ಬಾರಿ ಕರೆ ಮಾಡಿದ್ದರು. ಈ ಎಲ್ಲವೂ ಸೇರಿ ಅವರು ತಮ್ಮ ಕೆಲಸದಿಂದ ನಿರ್ಗಮಿಸುವಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+