ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷ!

ನಿನ್ನೆ ರಾತ್ರಿಯಿಂದಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಚಿರತೆಯ ಹುಡುಕಾಟ ನಡೆಸಿದ್ದು ಯಾವುದೇ ಸುಳಿವು ದೊರೆತಿಲ್ಲ. ನಿನ್ನೆ ಸಂಜೆ ರೈತರೊಬ್ಬರು ಚೀರನಹಳ್ಳಿ ಮೂಲಕ ತಮ್ಮ ಹಳ್ಳಿಗೆ ಹೋಗುತ್ತಿದ್ದಾಗ ಅವರಿಗೆ ದಾರಿಯಲ್ಲಿ ಕಬ್ಬಿನ ಗದ್ದೆಯತ್ತ ನೆಗೆದು ಓಡುತ್ತಿದ್ದ ಚಿರತೆ ಕಾಣಿಸಿತ್ತು. ಅವರು ತಮ್ಮ ಗ್ರಾಮಕ್ಕೆ ತೆರಳಿ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಚಿರತೆಯಿದ್ದ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಚಿರತೆಯ ಹುಡುಕಾಟ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿಯಾದುದರಿಂದ ಹಿಂತಿರುಗಿ ಇಂದು ಬೆಳಿಗ್ಗೆಯಿಂದಲೇ ಮತ್ತೆ ಚಿರತೆಯ ಹುಡುಕಾಟ ಆರಂಭಿಸಲಾಗಿದೆ.
ಈಗಾಗಲೇ ಕಬ್ಬಿನ ಗದ್ದೆಯಲ್ಲಿ ಚಿರತೆ ಅಡ್ಡಾಡಿದ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿರುವುದು ಸ್ಪಷ್ಟವಾಗಿದೆ. ಸುತ್ತಮುತ್ತ ಕಬ್ಬಿನಗದ್ದೆಯಿರುವುದರಿಂದ ಅದನ್ನು ಹುಡುಕುವುದು ಕೂಡ ಒಂದು ಸವಾಲ್ ಆಗಿ ಪರಿಣಮಿಸಿದೆ.
ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಸೂಚಿಸಿದ್ದಾರೆ. ಅಲ್ಲದೆ ಚಿರತೆ ಒಂದೇ ಸ್ಥಳದಲ್ಲಿ ನಿಲ್ಲದೆ ಅಡ್ಡಾಡುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಎಚ್ಚರವಾಗಿದ್ದು ಚಿರತೆಯಿರುವ ಸುಳಿವು ದೊರೆತಲ್ಲಿ ಕೂಡಲೇ ಮಾಹಿತಿ ನೀಡುವಂತೆಯೂ ಮನವಿ ಮಾಡಿದ್ದಾರೆ.
ಚಿರತೆಯನ್ನು ಬೋನು ಅಥವಾ ಬಲೆಯಿರಿಸಿ ಹಿಡಿಯಲು ಕ್ರಮಕೈಗೊಳ್ಳುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರೈತರಲ್ಲಿ ಆತಂಕ ಮನೆಮಾಡಿದ್ದು, ಹೊಲಗದ್ದೆಗಳಿಗೆ ತೆರಳಲು ಹಿಂಜರಿಯುತ್ತಿದ್ದಾರೆ. ಚಿರತೆ ಸೆರೆಸಿಕ್ಕ ಬಳಿಕವಷ್ಟೆ ರೈತರ ಆತಂಕ ದೂರವಾಗಲಿದೆ.












Click it and Unblock the Notifications