ಭಾರೀ ಮಳೆಗೆ ನಡುಗಡ್ಡೆಯಂತಾದ ಭಾಗಮಂಡಲ
ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಾದ್ಯಂತ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮಗಳೆಲ್ಲ ಕತ್ತಲಲ್ಲಿ ಮುಳುಗಿವೆ.
ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಡುವು ನೀಡಿದ್ದ ಮಳೆ ಸಂಜೆ ವೇಳೆಯಲ್ಲಿ ಮತ್ತೆ ಚೇತರಿಸಿಕೊಂಡು ಧಾರಾಕಾರವಾಗಿ ಸುರಿದಿದ್ದರಿಂದ ಭಾಗಮಂಡಲದಲ್ಲಿ ಕಾವೇರಿ ನೀರಿನ ಹರಿಯುವಿಕೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಸುಜ್ಯೋತಿ ಹಾಗೂ ಕನ್ನಿಕೆ ನದಿಗಳು ಸೇರುವ ಸಂಗಮ ಜಲಾವೃತಗೊಂಡಿದೆ. ನಾಪೋಕ್ಲಿಗೆ ಸಂಪರ್ಕ ಕಲ್ಪಿಸುವ ಅಯ್ಯಂಗೇರಿ ರಸ್ತೆಯ ಮೇಲೆ ನೀರು ಉಕ್ಕೇರಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ನದಿಯ ನೀರು ಭತ್ತದ ಗದ್ದೆಗಳಿಗೆ ನುಗ್ಗಿದ ಪರಿಣಾಮ ಚೇರಂಬಾಣೆ, ಚೆಟ್ಟಿಮಾನಿ, ಕೋಪಟ್ಟಿಯ ಗದ್ದೆಬಯಲುಗಳು ಜಲಾವೃತಗೊಂಡಿವೆ. ಇನ್ನೂ ಗದ್ದೆಯಲ್ಲಿ ನಾಟಿ ಕಾರ್ಯ ಆರಂಭಿಸಿಲ್ಲದ ಕಾರಣ ಯವುದೇ ನಷ್ಟವಾಗಿಲ್ಲ. ಕೆಲವೆಡೆ ಮನೆಗಳ ಮೇಲೆ ಮರಗಳು ಮುರಿದು ಬಿದ್ದು ನಷ್ಟ ಉಂಟುಮಾಡಿವೆ.
ಮಹಿಳೆ ಸಾವು : ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ಮಸೀದಿಯ ಗೋಡೆಗೆ ಹೊಂದಿಕೊಂಡಂತೆ ಕಟ್ಟಿಕೊಂಡಿದ್ದ ಮನೆಯ ಮನೆಯ ಗೋಡೆ ಕುಸಿದು ಬಿದ್ದು ಫಾತಿಮಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಆದರೆ ಮನೆಯ ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ಪತಿ ಯೂಸುಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾರಂಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ತುಂಬಿ ಹರಿಯುತ್ತಿದ್ದು, ಕೆಆರ್ಎಸ್ ಜಲಾಶಯ ಸದ್ಯದಲ್ಲಿಯೇ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ.