ಮೈಸೂರಿನಲ್ಲಿ ಮತ್ತೊಬ್ಬ ಕಾಲೇಜು ವಿದ್ಯಾರ್ಥಿಯ ಅಪಹರಣ, ಕೊಲೆ

ಮಹಾಜನ ಕಾಲೇಜಿನಲ್ಲಿ ಎಂ.ಕಾಂ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದ ಮದನ್ಕುಮಾರ್ ಅಲಿಯಾಸ್ ಮಧು ಎಂಬಾತನನ್ನು ಅಪಹರಿಸಿ ಕೊಲೆ ಮಾಡಿರುವುದು ಬಯಲಿಗೆ ಬಂದಿದ್ದು, ಎನ್.ಆರ್.ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಸರೆ, ಕುರಿಮಂಡಿ ಬ್ಲಾಕ್ 3ನೇ ಅಡ್ಡರಸ್ತೆ ನಿವಾಸಿ ಪ್ರಭುಸ್ವಾಮಿ-ಪುಷ್ಪಾ ದಂಪತಿ ಪುತ್ರ ಪಿ.ಮದನ್ಕುಮಾರ್ ಅಲಿಯಾಸ್ ಮಧು (24) ಹತ್ಯೆಗೀಡಾದ ದುರ್ದೈವಿ. ಬಂಧಿತ ಆರೋಪಿ ಮಹಂತೇಶ ಕೆಸರೆ ನಾಯ್ಡುನಗರದ ನಿವಾಸಿ. ಬನ್ನಿಮಂಟಪದ ಶಿವರಾತ್ರೀಶ್ವರ ಬಡಾವಣೆಯ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ ಮಧುನನ್ನು ಮಹಂತೇಶ್ ಮೇ 19ರಂದು ಕಾರಿನಲ್ಲಿ ಅಪಹರಿಸಿದ್ದ.
ಪಾಂಡವಪುರ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಕಾರನ್ನು ನಿಲ್ಲಿಸಿ ಮದನ್ಕುಮಾರ್ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ ನಂತರ ಶವವನ್ನು ಚೀಲದಲ್ಲಿ ಕಟ್ಟಿ ಮಂಡ್ಯ ಜಿಲ್ಲೆಯ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಟಕಾ ಕೆರೆಯಿಂದ ವಳಗೆರೆಪುರಕ್ಕೆ ಹೋಗುವ ರಸ್ತೆಯಲ್ಲಿನ ಹೇಮಾವತಿ ನಾಲೆಗೆ ಬಿಸಾಡಿ ಪರಾರಿಯಾಗಿದ್ದ. ಶವವು ಕೊಳೆತ ಸ್ಥಿತಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಮಗ ಕಾಣೆಯಾಗಿರುವ ಕುರಿತು ಪ್ರಭುಸ್ವಾಮಿ ಅವರು ಎನ್.ಆರ್. ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ನೇಹಿತನಾದ ಮಹಂತೇಶ್ ಜೊತೆಯಲ್ಲಿ ಮದನ್ಕುಮಾರ್ ಹೋಗಿರಬಹುದೆಂದು ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದರು. ಶಂಕಿತ ಆರೋಪಿ ಮಹಂತೇಶನನ್ನು ಪುಷ್ಪಾಶ್ರಮ ಜಂಕ್ಷನ್ ಬಳಿ ಮಂಗಳವಾರ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ವೈಯಕ್ತಿಕ ವಿಚಾರಕ್ಕೆ ಮದನ್ ಅಡ್ಡಿಪಡಿಸಿದನೆಂದು ಹಾಗೂ ಹಣ ನೀಡಲು ಒತ್ತಾಯಪಡಿಸಿದ ಹಿನ್ನೆಲೆಯಲ್ಲಿ ಕಿರಿಕಿರಿ ತಾಳಲಾರದೆ ಗದಗ ಜಿಲ್ಲೆಯ ಶಿರಾ ತಾಲ್ಲೂಕು ಹೊಳೆ ಇಟ್ಟಿಗೆ ಗ್ರಾಮದಿಂದ ಬಾಲ್ಯ ಸ್ನೇಹಿತನೊಬ್ಬನನ್ನು ಕರೆಸಿಕೊಂಡು ಸಂಚು ರೂಪಿಸಿ ಮದನ್ಕುಮಾರನನ್ನು ಕಾರಿನಲ್ಲಿ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಮಹಂತೇಶ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸಿಪಿಗಳಾದ ಬಸವರಾಜ ಮಾಲಗತ್ತಿ, ಪಿ.ರಾಜೇಂದ್ರ ಪ್ರಸಾದ್, ಎಸಿಪಿ (ಎನ್.ಆರ್.ವಿಭಾಗ) ಎ.ಕೆ.ಸುರೇಶ್ ನೇತೃತ್ವದಲ್ಲಿ ಎನ್.ಆರ್.ಠಾಣೆ ಇನ್ಸ್ಪೆಕ್ಟರ್ ಕೆ.ಎನ್.ಯಶವಂತಕುಮಾರ್, ಎಸ್ಐಗಳಾದ ಗುರುಪ್ರಸಾದ್, ಎಸ್.ಪ್ರಶಾಂತ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ












Click it and Unblock the Notifications