ಪದ್ಮನಾಭನಿಗೆ 'ಓಣ ವಿಲ್ಲು' ತಯಾರಿ- ಅರ್ಪಣೆಯ ಕಥಾಸಾರ
ವಿಲ್ಲು ಎಂದರೆ ಬಿಲ್ಲು ಎಂದರ್ಥ. ಬಿಲ್ಲಿನಾಕಾರದ ಹಲಗೆಗಳಲ್ಲಿ ಭಿತ್ತಿ ಚಿತ್ರಗಳನ್ನು ರಚಿಸುವುದರಿಂದ ಅದಕ್ಕೆ ಓಣ ವಿಲ್ಲು ಎಂದು ಹೆಸರು ಬಂದಿದೆ. ಅಂತೆಯೇ ಇದು ದೋಣಿಯನ್ನೂ ಸಂಕೇತಿಸುತ್ತದೆ. ತಿರುವಾಂಕೂರು ಸಂಸ್ಥಾನವನ್ನು ಹಿಂದೆ ವಂಚಿನಾಡು ಎಂದು ಕರೆಯಲಾಗುತ್ತಿತ್ತು. ಮಲಯಾಳಂ ಭಾಷೆಯಲ್ಲಿ ವಂಚಿ ಎಂದರೆ ದೋಣಿ ಎಂದರ್ಥ.
ಓಣಂ ವಿಷ್ಣುವಿನ ದಶಾವತಾರಕ್ಕೆ ಸಂಬಂಧಿಸಿರುವ ಹಬ್ಬವಾಗಿರುವುದರಿಂದ ಬಹುತೇಕ ಓಣ ವಿಲ್ಲುಗಳು ದಶಾವತಾರದ ಕತೆಗಳನ್ನು ಒಳಗೊಂಡಿರುತ್ತವೆ. ತಿರು ಓಣಂ ದಿನ ಅನಂತ ಪದ್ಮನಾಭ ದೇವರಿಗೆ ಓಣ ವಿಲ್ಲು ಅರ್ಪಿಸುವ ಕ್ರಮ ಶತಮಾನಗಳಿಂದ ನಡೆದು ಬಂದಿದೆ. ಮರದ ಹಲಗೆಗಳಲ್ಲಿ ವಿಷ್ಣು ಕಥಾವಳಿಯನ್ನು ಆಕರ್ಷವಾಗಿ ಚಿತ್ರಿಸುವ ಒಂದು ಕುಟುಂಬವೇ ಇಲ್ಲಿದೆ. ವಣಿಯಮ್ಮೂಲ ವಿಲಯಿಲ್ ಪರಿವಾರದವರು ಸುಮಾರು ಮೂರು ಶತಮಾನಗಳಿಂದ ಓಣ ವಿಲ್ಲು ತಯಾರಿಸುತ್ತಿದ್ದಾರೆ. ಇವರ ಮೂಲ ತಮಿಳುನಾಡಿನ ಕಂಚೀಪುರ.
ಈಗಿರುವ ಭವ್ಯ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವನ್ನು 18ನೇ ಶತಮಾನದಲ್ಲಿ ಪುನರ್ ನಿರ್ಮಿಸಿರುವ ತಿರುವಾಂಕೂರು ಮಹಾರಾಜ ಮಾರ್ತಾಂಡ ವರ್ಮ ಈ ಕಲಾಕಾರರ ಪರಿವಾರವನ್ನು ಇಲ್ಲಿಗೆ ಕರೆ ತಂದು ನೆಲೆಗೊಳಿಸಿದ್ದಾರೆ. ದೇಗುಲದ ನಿರ್ಮಾಣ ಕಾರ್ಯ ಮುಗಿದ ನಂತರ ದೊರೆಯೇ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಈ ಪರಿವಾರದವರಿಗೆ ರಾಜಧಾನಿಯಲ್ಲಿ ಉಳಿಯುವ ವ್ಯವಸ್ಥೆ ಮಾಡಿ ಓಣ ವಿಲ್ಲು ತಯಾರಿಸುವ ಜವಾಬ್ದಾರಿ ವಹಿಸಿದರು.
ತಿರು ಓಣಂ ದಿನ ಮೊದಲ 12 ಓಣ ವಿಲ್ಲುಗಳನ್ನು ಕಲಾವಿದರೇ ದೇವರಿಗೆ ಸಮರ್ಪಿಸುತ್ತಾರೆ. ಅನಂತರ ತಿರುವಾಂಕೂರು ಅರಮನೆಯಲ್ಲಿ ಓಣ ವಿಲ್ಲು ಸಮರ್ಪಿಸುವ ಸಮಾರಂಭ ಪ್ರಾರಂಭವಾಗುತ್ತದೆ. ಉಳಿದ ಓಣ ವಿಲ್ಲುಗಳನ್ನು ಅವುಗಳನ್ನು ಕಾದಿರಿಸಿದ ಭಕ್ತರು ದೇವಸ್ಥಾನದಲ್ಲಿ ಸಮರ್ಪಿಸುತ್ತಾರೆ. ಸಾಧಾರಣವಾಗಿ 4.5 ಅಡಿ ಉದ್ದದ ತೆಳು ಮರದ ಹಲಗೆಗಳನ್ನು ಓಣ ವಿಲ್ಲು ತಯಾರಿಸಲು ಬಳಸುತ್ತಾರೆ.