ರೆಡ್ಡಿಗಳ ವಿರುದ್ಧ ವಾರಂಟ್ ಜಾರಿಯಾಗುತ್ತಲೇ ಇದೆ...

ಗಣಿಯ ಗಡಿ ಕಲ್ಲುಗಳ ನಾಶ ಮತ್ತು ಒತ್ತುವರಿ ಪ್ರಕರಣ ಕುರಿತು ಸಂಡೂರು ನ್ಯಾಯಾಲಯ ಜಾರಿ ಮಾಡಿದ್ದ 11 ವಾರೆಂಟ್ಗಳನ್ನು ತಲುಪಿಸುವಲ್ಲಿ ಕರ್ತವ್ಯಲೋಪ ಎಸಗಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿ, ಗೃಹ ಇಲಾಖೆ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದೆ. ಈ ವಿವಾದದ ಹಿಂದೆಯೇ ಗೃಹ ಇಲಾಖೆ ಮತ್ತೊಂದು ತಪ್ಪು ಪ್ರಕಟವಾಗುತ್ತಿದೆ. ಅದು, ಸಚಿವ ಜಿ. ಜನಾರ್ದನರೆಡ್ಡಿ, ಸಚಿವ ಬಿ. ಶ್ರೀರಾಮುಲು ಸೇರಿ ಅನೇಕರ ವಿರುದ್ಧ 28 ಬಾರಿ ಜಾಮೀನುರಹಿತ ವಾರೆಂಟ್ (ಎನ್ಬಿಡಬ್ಲ್ಯು) ಜಾರಿ ಆಗಿದ್ದರೂ ಕೂಡ, ಯಾವೊಬ್ಬ ಪೊಲೀಸ್ ಪೇದೆ ಅವರಿಗೆ ವಾರೆಂಟ್ ನೀಡಿಲ್ಲ. ಈಗ ಈ ತಪ್ಪಿಗೆ ಜಿಲ್ಲಾ ಪೊಲೀಸ್ ಯಾರಿಗೆ ಶಿಕ್ಷೆ ನೀಡುತ್ತದೆ ಕಾದು ನೋಡಬೇಕು?
ಹಿನ್ನೆಲೆ : 2007ರ ಎಪ್ರಿಲ್ 2ರಂದು ಸೈಯದ್ ಮುಜೀಬ್ ಎನ್ನುವ ಜೆಡಿಎಸ್ ಕಾರ್ಯಕರ್ತ, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಇಸ್ಮಾಯಿಲ್ ಎಂಬುವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕೌಲ್ಬಜಾರ್ ಪೊಲೀಸ್ ಠಾಣೆ ಮುಂದೆ ರೆಡ್ಡಿ ಸಹೋದರರು ಧರಣಿ ನಡೆಸಿದ್ದರು.
ಆಗ, ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ ಅನೇಕರು ಗುಂಪನ್ನು ಕಟ್ಟಿಕೊಂಡು ಇಸ್ಮಾಯಿಲ್ ಮನೆ ಹಾಗು ಕಚೇರಿ ಮೇಲೆ ದಾಳಿ ನಡೆಸಿ, ಧ್ವಂಸ ಮಾಡಿದಲ್ಲದೇ ಬೈಕ್ ಹಾಗು ಸ್ಕೂಟರ್ ಗಳನ್ನು ಸಂಪೂರ್ಣ ಹಾನಿ ಮಾಡಿದ್ದರು. ಈ ಕುರಿತು ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳ್ಳಾರಿಯ ಎರಡನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, 28 ಬಾರಿ ಜಾಮೀನು ರಹಿತ ವಾರೆಂಟ್ ಜಾರಿ ಆಗಿದೆ. ಒಂದು ವಾರೆಂಟ್ ಅನ್ನು ಕೂಡ ಆರೋಪಿಗಳು ಸ್ವೀಕರಿಸಿಲ್ಲ.
ಈ ಪ್ರಕರಣದ 32 ಆರೋಪಿಗಳ ಪೈಕಿ ಕೇಂದ್ರದ ಮಾಜಿ ಸಚಿವೆ ಬಸವರಾಜೇಶ್ವರಿ ಅವರ ಪುತ್ರ, ಬುಡಾ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಡಾ. ವೆಂಕಟಮಹಿಪಾಲ್ ಅವರು ಮಾತ್ರ ವಾರೆಂಟ್ ಸ್ವೀಕರಿಸಿ ತಪ್ಪದೇ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ. ಮಹಿಪಾಲ್ ಪ್ರಕರಣದ 9ನೇ ಆರೋಪಿ. ಇನ್ನುಳಿದ ಆರೋಪಿಗಳ ಪೈಕಿ ಪದ್ಮಾವತಿ ಜಿ. ಯಾದವ್ ಮೃತಪಟ್ಟಿದ್ದಾರೆ. ಪ್ರಸ್ತುತ ಈ ಆರೋಪಿಗಳಲ್ಲಿ ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರ ರೆಡ್ಡಿ, ಕಂಪ್ಲಿ ಶಾಸಕ ಟಿ.ಎಚ್. ಸುರೇಶ್ಬಾಬು, ಆಂಧ್ರದ ರಾಯದುರ್ಗದ ಕಾಂಗ್ರೆಸ್ ಶಾಸಕ, ರೆಡ್ಡಿಗಳ ಆಪ್ತಬಳಗದ ಕಾಯಂ ಸದಸ್ಯ ಕೆ. ರಾಮಚಂದ್ರಾರೆಡ್ಡಿ, ಸಂಸದ ಸಣ್ಣಫಕ್ಕೀರಪ್ಪ, ಪಾಲಿಕೆ ಸದಸ್ಯ ಕೆ. ಹನುಮಂತಪ್ಪ ಸೇರಿ ಅನೇಕರು ಪ್ರಮುಖರಿದ್ದಾರೆ.
ಗೊಂದಲಕ್ಕೆ ಕಾರಣ : ಈ ಪ್ರಕರಣವನ್ನು ಸಚಿವ ಸಂಪುಟದಲ್ಲಿ ಕೈಬಿಡಲಾಗಿದೆ ಎಂದು ಪ್ರಕಟಿಸಲಾಗಿತ್ತು. ಈ ಕುರಿತು ಸರ್ಕಾರಿ ಅಭಿಯೋಜಕರು ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಪ್ರಕರಣವನ್ನು ಕೈಬಿಟ್ಟಿರುವ ವಿಚಾರ ತಿಳಿಸಿದ್ದರು. ಆದರೆ, ನ್ಯಾಯಾಲಯ ಸರ್ಕಾರಿ ಅಭಿಯೋಜಕರ ಮನವಿಯನ್ನು ತಿರಸ್ಕರಿಸಿ ಪ್ರಕರಣದ ವಿಚಾರಣೆ ಮುಂದುವರೆಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲಾ ಆರೋಪಿಗಳಿಗೆ ವಾರೆಂಟ್ ಜಾರಿ ಆಗುತ್ತಲೇ ಇದೆ. ಜುಲೈ 27ರಂದು ಮತ್ತೊಮ್ಮೆ ಪ್ರಕರಣದ ವಿಚಾರಣೆ ನಡೆಯಲಿದೆ.











Click it and Unblock the Notifications