ಬೆಂಗಳೂರು ವಿಶ್ವವಿದ್ಯಾಲಯ ಮಾಜಿ ರಿಜಿಸ್ಟ್ರಾರ್ ಆತ್ಮಹತ್ಯೆ
ಶಾಂತಕುಮಾರ್ ಪತ್ನಿ ಪ್ರತಿಮಾ (55) ಹಾಗೂ ಮಗ ರುದ್ರ ರಕ್ಷಿತ್ ಶರತ್ ಜತೆ ಬಸವೇಶ್ವರನಗರ 15ನೇ ಮುಖ್ಯರಸ್ತೆಯಲ್ಲಿ ವಾಸವಿದ್ದರು. ಪ್ರತಿಮಾ ಅವರು ಭಾಷ್ಯಂ ವೃತ್ತದ ಸಮೀಪ ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಾರೆ. ಅವರ ಮಗಳು ನಿರ್ಮಿತಾ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಹವ್ಯಾಸಿ ಛಾಯಾಗ್ರಾಹಕರಾದ ಶರತ್ ಅವರಿಗೆ ಕೆಲ ತಿಂಗಳ ಹಿಂದೆ ಅಪಘಾತವಾಗಿ ಕಾಲು ಮುರಿದಿತ್ತು. ಇದರಿಂದಾಗಿ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗರ್ಭಿಣಿಯಾಗಿರುವ ನಿರ್ಮಿತಾ ಅವರ ಆರೈಕೆಗಾಗಿ ಅಮೆರಿಕಕ್ಕೆ ಹೋಗಲು ಉದ್ದೇಶಿಸಿದ್ದ ಪ್ರತಿಮಾ ಮುಂಜಾನೆ ಎದ್ದು ಸಿದ್ಧತೆ ನಡೆಸಿಕೊಳ್ಳುತ್ತಿದ್ದ ವೇಳೆ ಈ ಸಂದರ್ಭದಲ್ಲಿ ದಂಪತಿ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಇದರಿಂದ ಕೋಪಗೊಂಡ ಶಾಂತಕುಮಾರ್ ಪತ್ನಿಯ ತಲೆಯನ್ನು ಗೋಡೆಗೆ ಗುದ್ದಿಸಿ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥರಾದ ಪ್ರತಿಮಾ ಕುಸಿದು ಬಿದ್ದಿದ್ದಾರೆ. ಪತ್ನಿ ಸಾವನ್ನಪ್ಪಿರಬಹುದು ಎಂದು ಆತಂಕಗೊಂಡ ಅವರು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶರತ್ ಮನೆಯ ಮೇಲಿನ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದರು. ಬೆಳಿಗ್ಗೆ ಬಂದ ಮನೆ ಕೆಲಸದಾಕೆ ಕಾವೇರಿ ಬಾಗಿಲು ತಟ್ಟಿದಾಗ ಪ್ರತಿಕ್ರಿಯೆ ಬಾರಲಿಲ್ಲ. ಅನುಮಾನಗೊಂಡ ಕಾವೇರಿ, ಶರತ್ ಅವರಿಗೆ ವಿಷಯ ತಿಳಿಸಿದ್ದಾರೆ. ಶರತ್ ಕಿಟಕಿ ಗಾಜು ಒಡೆದು ನೋಡಿದಾಗ ಪ್ರತಿಮಾ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿದೆ. ನಂತರ ಅವರು ಬಾಗಿಲು ಮುರಿದು ಒಳ ಹೋದಾಗ ಶಾಂತಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ತಂದೆಗೆ ಕುದುರೆ ಜೂಜಿನ ಚಟವಿತ್ತು. ಸಾಲ ಮಾಡುತ್ತಿದ್ದರು. ಅದಕ್ಕಾಗಿ ಮನೆ ಮಾರಾಟ ಮಾಡಲು ಉದ್ದೇಶಿಸಿದ್ದರು. ಈ ವಿಷಯವಾಗಿ ಅವರು ತಾಯಿಯ ಜತೆ ಆಗಾಗ್ಗೆ ಜಗಳವಾಡುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ತಾಯಿ ವಿಚ್ಛೇದನ ಪಡೆಯಲು ಯತ್ನಿಸಿದ್ದರು' ಎಂದು ಶರತ್ ದೂರು ಕೊಟ್ಟಿದ್ದಾರೆ. ಪ್ರತಿಮಾ ಸ್ಥಿತಿ ಗಂಭೀರವಾಗಿದ್ದು, ನಿಮ್ಹಾನ್ಸ್ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.