ಕಾಡಿದ ರಾತ್ರಿ ಪಾಳಿ : ಪತ್ನಿ, 2 ಮಕ್ಕಳೊಂದಿಗೆ ಪತಿ ಆತ್ಮಹತ್ಯೆ

ವಿಶ್ವಪ್ರಿಯ ಲೇಔಟ್ ಆರನೇ ಅಡ್ಡರಸ್ತೆ ನಿವಾಸಿ ಎಸ್.ಮೂರ್ತಿ (38) ಅವರು ಪತ್ನಿ ಲಕ್ಷ್ಮಿ (35), ಮಕ್ಕಳಾದ ಯಶಸ್ (12) ಹಾಗೂ ರೋಹಿತ್ (10) ಅವರನ್ನು ಕೊಲೆ ಮಾಡಿ ನಂತರ ನೇಣು ಹಾಕಿಕೊಂಡಿದ್ದಾರೆ.
ಅವರು ಆಡುಗೋಡಿಯ ಮೈಕೊ ಕಾರ್ಖಾನೆಯಲ್ಲಿ ಮೆಷಿನ್ ಆಪರೇಟರ್ ಆಗಿದ್ದರು. ಯಶಸ್ ಮತ್ತು ರೋಹಿತ್ ಬೇಗೂರು ರಸ್ತೆಯ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಕ್ರಮವಾಗಿ ಆರು ಹಾಗೂ ನಾಲ್ಕನೇ ತರಗತಿ ಓದುತ್ತಿದ್ದರು.
1996ರಲ್ಲಿ ಮೈಕೊ ಕಾರ್ಖಾನೆಗೆ ಸೇರಿದ್ದ ಅವರು ವಿಶ್ವಪ್ರಿಯ ಲೇಔಟ್ ಮತ್ತು ತಾವರೆಕೆರೆ ಸಮೀಪ ಎರಡು ಹೊಸ ಮನೆಗಳನ್ನು ಕಟ್ಟಿಸಿದ್ದರು. ಅವರಿಗೆ ತಿಂಗಳಿಗೆ ಸುಮಾರು 40 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಮೂರ್ತಿ ಅವರನ್ನು ಇತ್ತೀಚೆಗಷ್ಟೇ 104ನೇ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವರು ಹೊಸ ಘಟಕದಲ್ಲಿ ರಾತ್ರಿ ಪಾಳಿಯಲ್ಲೂ ಕೆಲಸ ಮಾಡಬೇಕಿತ್ತು. ಇದರಿಂದ ಬೇಸರಗೊಂಡಿದ್ದ ಅವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದು ಪತ್ನಿಯ ಬಳಿ ಹಲವು ಬಾರಿ ಅಳಲು ತೋಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಇದೇ ವಿಷಯವಾಗಿ ಪತ್ನಿಯ ಜತೆ ಮಾತನಾಡಿ ಬೇಸರ ವ್ಯಕ್ತಪಡಿಸಿದ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದರಿಂದ ಮನನೊಂದ ಲಕ್ಷ್ಮಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿಗೆ ತಿಳಿಸಿದ್ದಾರೆ. ನಂತರ ದಂಪತಿ ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದಾರೆ.
ರಾತ್ರಿ 11.20ರ ಸುಮಾರಿಗೆ ಮೂರ್ತಿ ಅವರು ಚಿಕ್ಕಪ್ಪ ಕೃಷ್ಣಪ್ಪ ಮತ್ತು ಅವರ ಮಗ ವಿನೋದ್, ಸ್ನೇಹಿತ ರಾಮಮೂರ್ತಿ ಅವರ ಮೊಬೈಲ್ಗೆ ಕುಟುಂಬ ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಎಸ್ಎಂಎಸ್ ಕಳಿಸಿದ್ದರು. ಆದರೆ ಅವರೆಲ್ಲ ಮಲಗಿದ್ದರಿಂದ ಆ ಸಂದೇಶವನ್ನು ಗಮನಿಸಿರಲಿಲ್ಲ. ಮಂಗಳವಾರ ಬೆಳಗಿನ ಜಾವ ಎಚ್ಚರಗೊಂಡ ವಿನೋದ್ ಆ ಸಂದೇಶವನ್ನು ನೋಡಿ ಆತಂಕಗೊಂಡು ತಂದೆಗೆ ವಿಷಯ ತಿಳಿಸಿದರು.
ಬಳಿಕ ಅವರು ಮೂರ್ತಿ ಅವರ ಮನೆಯ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೂರ್ತಿ ಮೊದಲು ಪತ್ನಿಯ ಮುಖಕ್ಕೆ ತಲೆದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಮಕ್ಕಳ ಕೊಠಡಿಗೆ ತೆರಳಿ ಅವರನ್ನು ಪತ್ನಿಯ ರೀತಿಯಲ್ಲೇ ಕೊಲೆ ಮಾಡಿದ್ದಾರೆ. ನಂತರ ಅದೇ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಸಂಸ್ಥೆಯ ಆಡಳಿತ ಮಂಡಳಿಯವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದರು. ಆದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಇಷ್ಟವಿರಲಿಲ್ಲ. ಈ ವಿಷಯವಾಗಿ ಪತ್ನಿಯ ಬಳಿ ಅಳಲು ತೋಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದೆ. ನನ್ನ ಮಾತಿನಿಂದ ಬೇಸರಗೊಂಡ ಪತ್ನಿ ತಾನು ಮುತ್ತೈದೆಯಾಗಿ ಸಾಯಬೇಕು, ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದಿದ್ದಳು' ಎಂದು ಮೂರ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications