'ಧರ್ಮಸ್ಥಳಕ್ಕೆ ಹೋಗುವುದು ಖಚಿತ; 27 ನಿರ್ಣಾಯಕ ದಿನವಾಗಲಿ'
'ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಬರತ್ತಾರೊ, ಬಿಡುತ್ತಾರೊ ನನಗೆ ಗೊತ್ತಿಲ್ಲ. ಆದರೆ, ಇದೇ 26ರ ರಾತ್ರಿಯೇ ಕುಟುಂಬ ಸಮೇತನಾಗಿ ಧರ್ಮಸ್ಥಳಕ್ಕೆ ತೆರಳುತ್ತೇನೆ. ಈ ಹಿಂದೆ ನಾನು ಹೇಳಿದಂತೆ ಮಂಜುನಾಥನ ಮುಂದೆ ಪ್ರಮಾಣ ಮಾಡುವುದಂತೂ ಖಚಿತ' ಎಂದು ಅವರು ತಿಳಿಸಿದ್ದಾರೆ.
'ಆಯುರ್ವೇದ ಚಿಕಿತ್ಸೆ ಸಲುವಾಗಿ ಒಂದು ವಾರ ಕಾಲ ಕೇರಳಕ್ಕೆ ತೆರಳಿದ್ದ ಅವರು ಸೋಮವಾರ ಸಂಜೆ ನಗರಕ್ಕೆ ವಾಪಸಾದರು. ಕೇರಳದ ಗುರುವಾಯೂರಿನಲ್ಲಿ ದೇವರ ದರ್ಶನ ಪಡೆದ ನಂತರ ನಗರಕ್ಕೆ ಬಂದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಆಣೆ, ಪ್ರಮಾಣ ಎನ್ನುವುದು ಸಂವಿಧಾನ ಬಾಹಿರವೇನೂ ಅಲ್ಲ. ಹೀಗಾಗಿ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತಿನ ಪ್ರಕಾರ ನಾನು ನಡೆದುಕೊಳ್ಳುತ್ತೇನೆ' ಎಂದರು.
'ಮುಖ್ಯಮಂತ್ರಿಯಾದ ನನ್ನ ಮೇಲೆಯೇ ಆರೋಪ ಬಂದಾಗ ಅದನ್ನು ನಿರಾಕರಿಸಿ, ಜನರಿಗೆ ಸತ್ಯ ತಿಳಿಸುವುದು ನನ್ನ ಕರ್ತವ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಯಿತು' ಎಂದು ಸಮರ್ಥಿಸಿಕೊಂಡ ಅವರು 'ಎಲ್ಲದಕ್ಕೂ 27 ರಂದು ಉತ್ತರ ನೀಡುತ್ತೇನೆ. ಅಲ್ಲಿಯವರೆಗೂ ಏನನ್ನೂ ಮಾತನಾಡುವುದಿಲ್ಲ' ಎಂದು ಮೌನವಾದರು.