ಕುಡಿತಕ್ಕೆ ಕನಿಷ್ಠ ವಯಸ್ಸು ಏರಿಕೆ ಇಲ್ಲ : ರೇಣುಕಾಚಾರ್ಯ
ಗುರುವಾರ ಪತ್ರಕರ್ತರೊಂದಿಗೆ ಈ ವಿಷಯವಾಗಿ ಸ್ಪಷ್ಟನೆ ನೀಡಿದ ರೇಣುಕಾಚಾರ್ಯ ಅವರು, ಕರ್ನಾಟಕದಲ್ಲಿ 21 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮದ್ಯ ಸೇವನೆಯ ಅವಕಾಶ ನೀಡಲಾಗಿದೆ. ಕನಿಷ್ಠ ವಯಸ್ಸನ್ನು 25ಕ್ಕೆ ಏರಿಸುವ ಉದ್ದೇಶ ಖಂಡಿತವಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರ ಜೂನ್ 1ರಿಂದ ಕುಡಿತಕ್ಕೆ ಕನಿಷ್ಠ ವಯೋಮಿತಿಯನ್ನು 25ಕ್ಕೆ ಏರಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವೂ ಇದೇ ನೀತಿಯನ್ನು ಪಾಲಿಸುವುದಾ ಎಂಬ ಪ್ರಶ್ನೆ ಉದ್ಭವವಾಗಿತ್ತು. ಸರಕಾರದ ಈ ನಿರ್ಧಾರಕ್ಕೆ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಇದನ್ನು ವಿರೋಧಿಸಿದ್ದಾರೆ.
ಆದರೆ, ಕರ್ನಾಟಕದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಬಂಗಾರದ ಮೊಟ್ಟೆ ಇಡುತ್ತಿರುವ ಕೋಳಿಯನ್ನು ಕತ್ತರಿಸಲಾದೀತೆ? ಅಬಕಾರಿ ಇಲಾಖೆಯಿಂದ ಕಳೆದ ಹಣಕಾಸು ವರ್ಷದಲ್ಲಿ 8,074 ಕೋಟಿ ರು. ಬಂಡವಾಳ ಸರಕಾರದ ಬೊಕ್ಕಸಕ್ಕೆ ಹರಿದು ಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 8,516 ಕೋಟಿ ರು. ಆದಾಯ ತರುವ ಗುರಿಯನ್ನು ರೇಣುಕಾಚಾರ್ಯ ಹೊಂದಿದ್ದಾರೆ.
ಕರ್ನಾಟಕದಲ್ಲಿರುವ ಬಾರುಗಳಲ್ಲಿ ಮಹಿಳೆಯರು ಬಾರ್ಟೆಂಡರ್ ಆಗಿ ಕಾರ್ಯ ನಿರ್ವಹಿಸುವ ಬಗ್ಗೆ ಸರಕಾರ ಮತ್ತು ಪೊಲೀಸ್ ಇಲಾಖೆಯ ನಡುವೆ ಎದ್ದಿದೆಯೆನ್ನಲಾದ ತಿಕ್ಕಾಟದ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಅಂತಹ ಯಾವುದೇ ತಿಕ್ಕಾಟವಿಲ್ಲ, ಬಾರುಗಳಲ್ಲಿ ಮಹಿಳೆಯರನ್ನು ನಿಷೇಧಿಸಿ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ ಎಂದರು.
ಕೆಲ ದಿನಗಳ ಹಿಂದೆ ಕೆಲ ಬಾರುಗಳ ಮೇಲೆ ದಾಳಿ ನಡೆಸಿದ್ದ ಬೆಂಗಳೂರು ಪೊಲೀಸರು, ಬಲವಂತವಾಗಿ ಮಹಿಳೆಯರನ್ನು ಬಾರ್ಟೆಂಡರ್ ಆಗಿ ಕೆಲಸ ಮಾಡಿಸುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಬೆಂಗಳೂರಿನಲ್ಲಿ ಇರುವ 800 ಬಾರುಗಳಲ್ಲಿ ಕೇವಲ 50 ಬಾರುಗಳಲ್ಲಿ ಮಾತ್ರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ನುಡಿದರು.