ಯಡಿಯೂರಪ್ಪರನ್ನು ಜೈಲಿಗೆ ತಳ್ಳುವತ್ತ ಕಾಂಗ್ರೆಸ್ ನಡಿಗೆ
ಬೇರುಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಲು ಹಾಗೂ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಶ್ರೀಸಾಮಾನ್ಯರಿಗೆ ಅರಿವು ಮೂಡಿಸಲು ಕಾಂಗ್ರೆಸ್ ಬುಧವಾರದಿಂದ ಆರಂಭಿಸಿರುವ 60 ದಿನಗಳ 'ಕಾಂಗ್ರೆಸ್ ನಡಿಗೆ ಜನರ ಬಳಿಗೆ' ಆಂದೋಲನದ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಈ ಎಚ್ಚರಿಕೆ ನೀಡಿದರು.
ತುಮಕೂರಿನ ಕೋರಾ ಗ್ರಾಮದಲ್ಲಿ ನಡೆದ ಈ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಾಗಬಹುದು. ಆ ಸಂದರ್ಭದಲ್ಲಿ ರಾಜ್ಯದ ಜನತೆ ಕಾಂಗ್ರೆಸ್ಗೆ ಬೆಂಬಲ ನೀಡಿದರೆ ದುರಾಡಳಿತ ನಡೆಸುತ್ತಿರುವ ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ಭ್ರಷ್ಟ ಸದಸ್ಯರನ್ನು ಜೈಲಿಗೆ ಕಳುಹಿಸುವುದು ಖಚಿತ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಗೋವಾ ಮಾಜಿ ಮುಖ್ಯಮಂತ್ರಿ ಲೂಸಿನೋ ಫೆಲೆರೋ, ಭ್ರಷ್ಟಾಚಾರ ನಡೆಸಿದರು ಎಂಬ ಆರೋಪ ಬಂದ ಮಾತ್ರಕ್ಕೆ ಕಲ್ಮಾಡಿ, ಎ. ರಾಜಾ ಹಾಗೂ ಕನಿಮೋಳಿ ಜೈಲು ಸೇರಿದ್ದಾರೆ. ಆದರೆ, 2ಜಿ ಸ್ಪೆಕ್ಟ್ರಂ ಹಾಗೂ ಕಾಮನ್ವೆಲ್ತ್ ಹಗರಣಕ್ಕಿಂತಲೂ ದೊಡ್ಡ ಮಟ್ಟದ ಗಣಿ ಅದಿರು ಭ್ರಷ್ಟಾಚಾರ ನಡೆಸಿದ ಯಡಿಯೂರಪ್ಪ ಇನ್ನೂ ಏಕೆ ಜೈಲಿಗೆ ಹೋಗಿಲ್ಲ ಎಂಬುದಕ್ಕೆ ಬಿಜೆಪಿ ವರಿಷ್ಠರು ಉತ್ತರಿಸಬೇಕು ಎಂದು ಆಗ್ರಹಿಸಿದರು.