ಜಯಾ ಸ್ವಪ್ರತಿಷ್ಠೆ : ಪುಸ್ತಕವಿಲ್ಲದೆ ಶಾಲಾಮಕ್ಕಳ ಪರದಾಟ
ಮಾಜಿ- ಹಾಲಿ ಮುಖ್ಯಮಂತ್ರಿಗಳ ಸ್ವಪ್ರತಿಷ್ಠೆ ಪರಾಕಾಷ್ಠೆಗೆ ತಲುಪಿದ್ದು, ತಮಿಳುನಾಡಿನ ಶಾಲಾ ಪುಸ್ತಕದಲ್ಲಿರುವ ಕರುಣಾನಿಧಿ ರಚಿತ ಕವನ ಮತ್ತು ಕನಿಮೋಳಿ ಆರಂಭಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಹೊಗಳಿಕೆಯ ಪಠ್ಯಗಳನ್ನು ತೆಗೆದು ಹಾಕುವಂತೆ ಜಯಲಲಿತಾ ಅಧಿಕಾರ ವಾಣಿ ಹೇಳಿತ್ತು.
ಆದರೆ ಸುಪ್ರಿಂಕೋರ್ಟ್ ವಿವೇಕವಾಣಿ ಇದಕ್ಕೆ ಬ್ರೇಕ್ ಹಾಕಿದೆ. ಈ ಕುರಿತು ತಜ್ಞರ ಸಮಿತಿ ವರದಿ ನೀಡುವ ತನಕ ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸುಪ್ರಿಂಕೋರ್ಟ್ ಸೂಚಿಸಿದೆ. ವರದಿ ನೀಡಲು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಲು 3 ವಾರದ ಗಡುವು ನೀಡಿದೆ.
ಆಡಳಿತಾತ್ಮಕವಾಗಿ ಅಥವಾ ಶಾಸನಬದ್ಧವಾಗಿ ಕೈಗೊಳ್ಳುವ ನಿರ್ಧಾರಗಳು ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಈ ಶೈಕ್ಷಣಿಕ ವರ್ಷದಲ್ಲಿ 1ರಿಂದ 6ನೇ ತರಗತಿವರೆಗಿನ ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಕೂಡದು. ತಮಿಳುನಾಡು ಏಕರೂಪ ಶಾಲಾ ಶಿಕ್ಷಣ ವ್ಯವಸ್ಥೆ ಕಾಯಿದೆ -2010 ಮುಂದುವರಿಯಲಿದೆ ಎಂದು ನ್ಯಾಯಮೂರ್ತಿಗಳಾದ ಬಿ.ಎಸ್.ಚೌಹಾನ್ ಮತ್ತು ಸ್ವತಂತ್ರ ಕುಮಾರ್ ಅವರ ನ್ಯಾಯಪೀಠ ಹೇಳಿದೆ.
ತಮಿಳುನಾಡು ಏಕರೂಪ ಶಾಲಾ ಶಿಕ್ಷಣ ವ್ಯವಸ್ಥೆ ಕಾಯಿದೆ ಜಾರಿಯನ್ನು ಮುಂದುವರಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿ ಮೇಲೆ ಪೀಠ ಈ ಆದೇಶ ಹೊರಡಿಸಿತು. 2010-11ರಲ್ಲಿ ಡಿಎಂಕೆ ಸರಕಾರ ತಂದಿದ್ದ ಕಾಯಿದೆ ಹತ್ತನೆ ತರಗತಿ ತನಕ ಶಾಲಾ ಮಕ್ಕಳಿಗೆ ಸಮಾನ ಪಠ್ಯಕ್ರಮವನ್ನು ಜಾರಿಗೆ ತಂದಿತ್ತು.