ಹೇಡಿಯಂತೆ ಓಡಿ ಹೋದ ಬಾಬಾ: ಎಚ್ ಕೆ ಪಾಟೀಲ್ ಲೇವಡಿ
11 ಸಾವಿರ ಜನರ ಶಸ್ತ್ರ ಪಡೆ ಕಟ್ಟುವುದಾಗಿ ಬಾಬಾ ಹೇಳಿಕೆ ನೀಡಿದ್ದಾರೆ. ಬಾಬಾ ಒಬ್ಬ ಕೆಟ್ಟ ಮನಸ್ಥಿತಿಯುಳ್ಳ ವ್ಯಕ್ತಿ ಎಂದು ಈ ಹೇಳಿಕೆಯಿಂದ ಅರ್ಥ ಮಾಡಿಕೊಳ್ಳಬಹುದು. ಗಾಂಧೀಜಿಯವರ ಹೋರಾಟಕ್ಕೂ ಬಾಬಾ ಅವರ ಹೋರಾಟಕ್ಕೂ ತುಲನೆ ಮಾಡಲಾಗುತ್ತದೆಯೇ? ರಾಷ್ಟ್ರಪಿತ ಗಾಂಧೀಜಿಯವರ ಹೋರಾಟದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದ ವ್ಯಕ್ತಿ ಬಾಬಾ ಎಂದು ಪಾಟೀಲ್ ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿ ಬಾಬಾ ಬೆಂಬಲಿಸಿ ರಾಜಘಾಟ್ ನಲ್ಲಿ ನೃತ್ಯ ಮಾಡುತ್ತಾರೆ. ಆ ಸ್ಥಳದ ಪಾವಿತ್ರ್ಯತೆ ತಿಳಿಯದ ಅವರು ಈ ಬಗ್ಗೆ ಟೀಕೆಗಳು ಕೇಳಿ ಬಂದಾಗ ದೇಶದ ಕ್ಷಮೆಯಾಚಿಸಬೇಕಿತ್ತು. ಅದರ ಬದಲು ರಾಷ್ಟ್ರ ಪ್ರೇಮ ಬಿಂಬಿಸುವ ಹಾಡಿಗೆ ನೃತ್ಯ ಮಾಡಿರುವುದಾಗಿ ಬಾಲಿಶ ಹೇಳಿಕೆ ನೀಡುತ್ತಾರೆ ಎಂದು ಪಾಟೀಲ್ ಸುಷ್ಮಾ ಸ್ವರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ರಮವಾಗಿ ವಿದೇಶದಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ತರಲು ಕೇಂದ್ರ ಸರಕಾರ ಕಾನೂನು ರೂಪಿಸಲು ಮುಂದಾಗಿರುವುದು ಶ್ಲಾಘನೀಯ. ಕೇಂದ್ರ ಸರಕಾರ ಚಳಿಗಾಲದ ಅಧಿವೇಶನದಲ್ಲಿಯೇ ಇದನ್ನು ಮಂಡಿಸಲು ಸಿದ್ದತೆ ನಡೆಸುತ್ತಿದೆ ಎಂದು ಪಾಟೀಲ್ ಹೇಳಿಕೆ ನೀಡಿದ್ದಾರೆ.