ತಿಹಾರ್ ನಲ್ಲಿ ಇಡ್ಲಿ, ದೋಸೆ ಘಮಘಮ: ಕೃಪೆ-ಕನಿಮೋಳಿ
ಉತ್ತರ ಭಾರತದ ಕೈದಿಗಳೂ ದೋಸೆ, ಉಪ್ಪಿಟ್ಟು, ಇಡ್ಲಿ, ಸಾಂಬಾರ್, ಕಾಯಿ ಚಟ್ನಿ ಸವಿಯುತ್ತಿದ್ದಾರೆ. ಫೆಬ್ರವರಿಯಲ್ಲಿ ಡಿಎಂಕೆ ನಾಯಕ ಎ. ರಾಜಾ, ತಿಹಾರ್ ಜೈಲಿನೊಳಗೆ ಕಾಲಿಟ್ಟ ಗಳಿಗೆಯಿಂದ ಇತರೆ ಕೈದಿಗಳ ನಾಲಿಗೆ ರುಚಿಯ ಅದೃಷ್ಟವೂ ಖುಲಾಯಿಸಿದೆ. ತಿಹಾರ್ ಕಾರಾಗೃಹದ ಒಂದು, ನಾಲ್ಕು ಹಾಗೂ ಆರನೇ ನಂಬರಿನ ಜೈಲುಗಳಲ್ಲಿರುವ ಕ್ಯಾಂಟಿನ್ಗಳಲ್ಲಿ ಈಗ ನಿತ್ಯ ದಕ್ಷಿಣ ಭಾರತದ ಅಡುಗೆ ಸಿದ್ಧವಾಗುತ್ತಿದೆ.
ಇದಕ್ಕಾಗಿ ತಮಿಳುನಾಡಿನ ಉಪ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ಅಡುಗೆ ಭಟ್ಟನನ್ನು ತಿಹಾರ್ ಜೈಲಿಗೆ ಕರೆಸಿ, ಕಾರಾಗೃಹದಲ್ಲಿ ಆಹಾರ ಸಿದ್ಧಪಡಿಸುವವರಿಗೆ ತರಬೇತಿ ಕೊಡಿಸಲಾಗಿದೆ. ಈ ಮೊದಲು ಜೈಲಿನ ಕ್ಯಾಂಟೀನ್ನಲ್ಲಿ ಸಹಜವಾಗಿಯೇ ಉತ್ತರ ಪ್ರದೇಶದ ತಿನಿಸುಗಳಾದ ಛೋಲೆ ಭತೂರೆ, ಪೂರಿ ಸಬ್ಜಿ, ನಮ್ಕೀನ್ ಸಮೋಸಾ ಸ್ಯಾಂಡ್ವಿಚ್ ಹಾಗೂ ಚಹಾವನ್ನು ಮಾತ್ರ ನೀಡಲಾಗುತ್ತಿತ್ತು.
ಇನ್ನು, ಡಿಎಂಕೆ ಸಂಸದೆ ಹಾಗೂ ಕರುಣಾನಿಧಿ ಅವರ ಪುತ್ರಿಯೂ ಆದ ಕನಿಮೋಳಿ ತಿಹಾರ್ ಹೊಸ್ತಿಲು ತುಳಿದು ಒಳಬಂದ ನಂತರ ಮಹಿಳೆಯರ ಪಾಲಿನ ಕ್ಯಾಂಟೀನ್ ಆದ ನಂ 6ಕ್ಕೂ ಸಹಾ ಹೊಸ ಅದೃಷ್ಟ ಖುಲಾಯಿಸಿದೆ. ಇಲ್ಲೂ ಕೂಡಾ ದಕ್ಷಿಣ ಭಾರತದ ಅಡುಗೆ, ತಿಂಡಿ-ತಿನಿಸುಗಳು ಮಹಿಳಾ ಕೈದಿಗಳ ದಾಹ ತಣಿಸುತ್ತಿವೆ!
ನಂ.4ರ ಕ್ಯಾಂಟೀನ್ಗೆ ಸಮೀಪವಾಗಿ ಕಲೈಜ್ಞರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಇದ್ದಾರೆ. ಹೀಗಾಗಿ ಕ್ಯಾಂಟೀನ್ ನಂ.4ರಲ್ಲೂ ಕೂಡಾ ಇಡ್ಲಿ, ದೋಸೆ ಇತ್ಯಾದಿ ದಕ್ಷಿಣ ಭಾರತದ ತಿಂಡಿ-ತಿನಿಸುಗಳು ಬೇಯುತ್ತಿವೆ. ಜೈಲಿನ ಕ್ಯಾಂಟೀನ್ನಲ್ಲಿ ಕೈದಿಗಳು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಅಥವಾ ಬಾಯಿರುಚಿಗೆ ಬೇಕಾದ ಇನ್ನಿತರೆ ತಿಂಡಿ ತಿನಿಸುಗಳನ್ನು ತಿನ್ನಲು ಒಂದು ಸಾವಿರ ರುಪಾಯಿ ಕೂಪನ್ಗಳನ್ನು ಬಳಸಬಹುದು.