ಮೈಸೂರಿನಲ್ಲಿ ಸೆರೆಸಿಕ್ಕ ಪುಂಡಾನೆಗಳು ಬಂಡೀಪುರಕ್ಕೆ

ಬುಧವಾರ ಮೈಸೂರಿನ ಬಂಬೂ ಬಜಾರ್ನಲ್ಲಿ ಪ್ರತ್ಯಕ್ಷವಾಗಿ ನಗರದಲ್ಲಿ ದಾಂಧಲೆ ನಡೆಸುವ ಮೂಲಕ ಓರ್ವ ವ್ಯಕ್ತಿ ಹಾಗೂ ಎರಡು ಹಸುವನ್ನು ಬಲಿ ತೆಗೆದು ಮೂರ್ನಾಲ್ಕು ಮಂದಿಯನ್ನು ಗಾಯಗೊಳಿಸಿದ್ದ ಪುಂಡಾನೆಯನ್ನು ಹಾಗೂ ನಾಯ್ಡುನಗರದ ಫಾರಂ ಹೌಸ್ನಲ್ಲಿ ಅವಿತುಕೊಂಡಿದ್ದ ಮತ್ತೊಂದು ಆನೆಯನ್ನು ಅರಿವಳಿಕೆ ಮದ್ದನ್ನು ನೀಡುವ ಮೂಲಕ ಸೆರೆಹಿಡಿಯಲಾಗಿತ್ತು.
ಸೆರೆ ಹಿಡಿದ ಆನೆಯನ್ನು ಪಳಗಿಸಿ ಇಲಾಖೆಯ ಉಪಯೋಗಕ್ಕೆ ಬಳಸಬೇಕೇ ಅಥವಾ ಮತ್ತೆ ಅರಣ್ಯಕ್ಕೆ ಬಿಡಬೇಕೆ ಎಂಬುವುದರ ಬಗ್ಗೆ ಚರ್ಚೆ ನಡೆದು, ಕೊನೆಗೆ ಕಾಡಿಗೆ ಬಿಡಲು ತೀರ್ಮಾನಿಸಲಾಗಿತ್ತು. ಅದರಂತೆ ಗುರುವಾರ ಮುಂಜಾನೆಯಿಂದಲೇ ಆನೆಗಳನ್ನು ಕೈಕಾಲು ಕಟ್ಟಿ ಲಾರಿಗೆ ಹತ್ತಿಸುವ ಕಾರ್ಯವನ್ನು ಕೈಗೊಳ್ಳಲಾಗಿತ್ತು.
ಈ ಕಾರ್ಯಕ್ಕೆ ಸಾಕಾನೆಗಳಾದ ಗಜೇಂದ್ರ, ಅಭಿಮನ್ಯು ಹಾಗೂ ಶ್ರೀರಾಮ ಆನೆಗಳನ್ನು ಬಳಸಿಕೊಳ್ಳಲಾಗಿತ್ತು. ಆದರೆ ಪುಂಡಾನೆಯನ್ನು ಲಾರಿಗೆ ಹತ್ತಿಸುವುದು ಸುಲಭದ ಕೆಲಸವಾಗಿರಲಿಲ್ಲ. ಲಾರಿಗೆ ಹತ್ತಲು ಒಪ್ಪದ ಪುಂಡಾನೆಗೆ ಏಟು ಹೊಡೆದು ಹತ್ತಿಸಲಾಯಿತು. ಬಳಿಕ ಅವುಗಳನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮರಳ ಹಳ್ಳದ ಆನೆ ಕಾರಿಡಾರ್ನಲ್ಲಿ ಬಿಡಲಾಯಿತು.
ಆನೆಗಳನ್ನು ಕಾಡಿಗೆ ಬಿಡುವ ಕಾರ್ಯಾಚರಣೆ ಸುಲಭದ್ದಾಗಿರಲಿಲ್ಲ. ಸುಮಾರು ಐದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳು, ಮಾವುತರು, ಸಾಕಾನೆಗಳು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ನಾಯ್ಡುನಗರದ ಫಾರಂ ಹೌಸ್ನಲ್ಲಿ ಸೆರೆ ಸಿಕ್ಕಿದ್ದ ಆನೆಯನ್ನು ಸಾಗಿಸಲು ಬೋನ್ನಂತೆ ನಿರ್ಮಿಸಲಾಗಿದ್ದ ವಿಶೇಷ ಲಾರಿಯನ್ನು ಬಳಸಲಾಗಿತ್ತು. ಬಂಡೀಪುರ ಅರಣ್ಯಕ್ಕೆ ಬಿಡುತ್ತಿದ್ದಂತೆಯೇ ಆನೆಗಳು ಬದುಕಿದೆಯಾ ಬಡಜೀವವೆ ಎಂಬಂತೆ ಅರಣ್ಯದೊಳಕ್ಕೆ ಓಡಿಹೋದವು.












Click it and Unblock the Notifications