ಮಲೆಯಾಳಂ ಕಡ್ಡಾಯ ವಿರುದ್ಧ ಕರ್ನಾಟಕ ಸಮಿತಿ ಆಂದೋಲನ
ಕೇರಳದ ಈ ಹಿಂದಿನ ಸರಕಾರ ಮಲೆಯಾಳಂ ಕಡ್ಡಾಯ ಮಾಡುವ ತೀರ್ಮಾನ ಕೈಗೊಂಡಿತ್ತು. ಇದರಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮಲೆಯಾಳಂ ಕಲಿಕೆ ಕಡ್ಡಾಯವಾಗಲಿದೆ.
"ಸರಕಾರದ ಇಂತಹ ನಿರ್ಧಾರದಿಂದಾಗಿ ಕಾಸರಗೋಡು ಕನ್ನಡ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಆದರೆ ಚುನಾಯಿತಗೊಂಡಿರುವ ನೂತನ ಸರಕಾರ ತಕ್ಷಣ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು" ಎಂದು ಕರ್ನಾಟಕ ಸಮಿತಿ ಅಧ್ಯಕ್ಷ ವಿ. ಬಿ. ಕಕ್ಕಿಲಾಯ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಅಸೆಂಬ್ಲಿ ಚುನಾವಣೆ ನಡೆದ ನಂತರ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಕನ್ನಡ ಸಿಲೆಬಸ್ ನಲ್ಲಿ ಮಲೆಯಾಳಂ ಕಡ್ಡಾಯಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಕಾಸರಗೋಡಿನಲ್ಲಿ 200 ಕನ್ನಡ ಮಾಧ್ಯಮ ಶಾಲೆಗಳಿವೆ. ಅದರಲ್ಲಿ ಎಂಬತ್ತು ಪ್ರೌಢಶಾಲೆಗಳಾಗಿವೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಕಾರಣಕ್ಕೆ ಪಿಯುಸಿ ಫಲಿತಾಂಶ ತಡೆಹಿಡಿಯಲಾಗಿದೆ. ಮುಂದಿನ ತಿಂಗಳು ಶಾಲೆಗಳು ಆರಂಭವಾಗಲಿದ್ದು ಸುತ್ತೋಲೆ ವಾಪಸ್ ಪಡೆಯದಿದ್ದರೆ ವಿದ್ಯಾರ್ಥಿಗಳು ತರಗತಿ ಬಹಿಷ್ಕಾರಿಸಲಿದ್ದಾರೆ ಎಂದರು.
ನೂತನ ಸುತ್ತೋಲೆಯಿಂದ ವಾರದ 5 ಗಂಟೆ ಕನ್ನಡ ಪಾಠದ ಅವಧಿ ಮೂರು ಗಂಟೆಗೆ ಇಳಿದಿದೆ. ಉಳಿದ ಎರಡು ಗಂಟೆ ಮಲೆಯಾಳಂ ಪಾಠಕ್ಕೆ ವಿನಿಯೋಗಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಒಟ್ಟಾರೆ ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗಲಿದೆ ಎಂದು ಕಕ್ಕಿಲಾಯ ಹೇಳಿದ್ದಾರೆ.
"ಕೇರಳ ಸರಕಾರದ ಸುತ್ತೋಲೆ ವಾಪಸ್ ಪಡೆಯಲು ರಾಜ್ಯ ಸರಕಾರ ಒತ್ತಡ ಹೇರಬೇಕು. ಇಲ್ಲವಾದಲ್ಲಿ ತೀವ್ರ ತರವಾದ ಆಂದೋಲನ ನಡೆಸಲು ಸಮಿತಿ ನಿರ್ಧರಿಸಿದೆ. ಇದಕ್ಕೆ ಹೆಚ್ಚಿನ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ" ಎಂದರು.
ಕಾಸರಗೋಡಿನಲ್ಲಿ ಇಂತಹ ತೊಂದರೆಗಳು ಉಂಟಾಗುತ್ತಿರುವುದರಿಂದ ಅಲ್ಲಿನ ಹೆಚ್ಚಿನ ಮಕ್ಕಳು ಕರ್ನಾಟಕ ಶಾಲೆಗಳಿಗೆ ವಲಸೆ ಬರುತ್ತಿದ್ದಾರೆ ಎಂದರು.













Click it and Unblock the Notifications