ಕೆಪಿಎಸ್ಸಿ ನೇಮಕಾತಿ ಅಕ್ರಮ ನಡೆದಿರುವುದು ನಿಜ: ಸಿಐಡಿ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ನಡೆಸುವ ಕರ್ನಾಟಕ ಆಡಳಿತ ಸೇವಾ (ಕೆಎಎಸ್) ಪರೀಕ್ಷೆ ಹಾಗೂ ಆಯ್ಕೆ ಸಂದರ್ಭದಲ್ಲಿ ನಡೆದಿರುವ ಹಣಕಾಸು ಅವ್ಯವಹಾರ, ನಕಲಿ ಪ್ರಮಾಣ ಪತ್ರ ಹಾಗೂ ಪಕ್ಷಪಾತದ ವರ್ತನೆ ಕುರಿತು ಸಿಐಡಿ ಪೊಲೀಸರು ಹೈಕೋರ್ಟ್ಗೆ ಸೋಮವಾರ ಈ ವರದಿಯನ್ನು ಸಲ್ಲಿಸಿದ್ದಾರೆ. ಆಯೋಗದಲ್ಲಿ 1998 ರಿಂದ 2004ರ ವರೆಗೆ ನಡೆದಿರುವ ಅವ್ಯವಹಾರ ಕುರಿತು ಸಿಐಡಿ ಪೊಲೀಸರು ಸಲ್ಲಿಸಿದ ತನಿಖಾ ವರದಿ ಇದಾಗಿದೆ.
ವರದಿಯಲ್ಲಿ ಉಲ್ಲೇಖೀಸಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕೆಂದು ಸಿಐಡಿ ಹೈಕೋರ್ಟ್ಗೆ ಮನವಿ ಮಾಡಿದ್ದು, ಶೀಘ್ರದಲ್ಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆಗೆ ಪ್ರತ್ಯೇಕವಾಗಿ ಆದೇಶ ನೀಡುವ ಸಾಧ್ಯತೆ ಇದೆ.
ಕೆಪಿಎಸ್ಸಿಯಲ್ಲಿ 1998 ರಿಂದ 2004ರ ವರೆಗೆ ನಡೆದಿರುವ ಅವ್ಯವಹಾರ ಕುರಿತು ತನಿಖೆ ಮೇ 30ರೊಳಗೆ ವರದಿ ನೀಡುವಂತೆ ಹೈಕೋರ್ಟ್ ಮೂರು ತಿಂಗಳ ಹಿಂದೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಸೋಮವಾರ ತನಿಖಾ ವರದಿ ಸಲ್ಲಿಸಿದ್ದಾರೆ.
ಹಾಲಿ ತಹಶೀಲ್ದಾರ್ ಗಳಾದ ಆಶಾ ಪರ್ವಿನ್, ಡಿ.ಆರ್. ಪುಷ್ಪಾ, ವೈ.ಬಿ.ಅರ್ಚನ, ಸಲ್ಮಾ ಫಿರ್ದೊಷ್ ಹಾಗೂ ಅಲ್ಲಾ ಭಕ್ಷ್ ಸೇರಿದಂತೆ 19 ಅಧಿಕಾರಿಗಳ ವಿರುದ್ಧ ಸಿಐಡಿ ಪೊಲೀಸರು ಅವ್ಯವಹಾರ ನಡೆಸಿರುವ ಆರೋಪ ಹೊರಿಸಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ, ದಾಖಲೆಗಳನ್ನು ತಿದ್ದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೆಪಿಎಸ್ಸಿ ಸದಸ್ಯರು ಹಾಗೂ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಕೆಲವರ ಪರವಾಗಿ ಸಂದರ್ಶನ ಹಾಗೂ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸಿದ್ದಾರೆ.
ಒಂದೇ ಜಾತಿಯ 19 ಅಭ್ಯರ್ಥಿಗಳು ಕೆಎಎಸ್ನಲ್ಲಿ ಏಕಕಾಲಕ್ಕೆ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗುವಂತೆ ಮಾಡುವಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರವಹಿಸಿದ್ದಾರೆ. ಈ ಕುರಿತು ಸಿಐಡಿ ಪೊಲೀಸರು ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ.












Click it and Unblock the Notifications