ಸಚಿವೆ ಶೋಭಾ- ಬಯ್ಯಾಪುರ ನಡುವೆ ಮಾತಿನ ಚಕಮಕಿ

ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜೆಸ್ಕಾಂ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಜಿಲ್ಲೆಯಲ್ಲಿ ನಡೆದಿರುವ ಇಂಧನ ಯೋಜನೆಗಳ ಸ್ಥಿತಿಗತಿಗಳ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಮಾಹಿತಿ ಪಡೆಯುವುದು ಸಚಿವೆ ಶೋಭಾ ಅವರ ಇರಾದೆಯಾಗಿತ್ತು.
ಈ ಹಂತದಲ್ಲಿ ಕಾಂಗ್ರೆಸ್ ನ ಮಾಜಿ ಸಚಿವ ಬಯ್ಯಾಪುರ ಅವರು ಏಕಾಏಕಿ ಶೋಭಾ ಮೇಲೆ ಹರಿಹಾಯ್ದಿದ್ದಾರೆ. 'ಆರು ತಿಂಗಳ ಹಿಂದೆ ವಿದ್ಯುತ್ ಕಾಮಗಾರಿಗಾಗಿ ಅರ್ಜಿ ಸಲ್ಲಿಸಿದ್ದೆವು. ಇನ್ನೂ ಒಂದೂ ಕೆಲಸ ಆಗಿಲ್ಲ. ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಿಮ್ಮ ಅಧಿಕಾರಿಗಳಿಗೆ ಇನ್ನಾದರೂ ಕೆಲಸ ಮಾಡಲು ಹೇಳಿ' ಎಂದು ಶೋಭಾ ಅವರನ್ನುದ್ದೇಶಿಸಿ ಬಯ್ಯಾಪುರ ಅವರು ಏರಿದ ಧ್ವನಿಯಲ್ಲಿ ಕೂಗಾಡತೊಡಗಿದರು.
ಈ ಸಂದರ್ಭದಲ್ಲಿ ತಾಳ್ಮೆ ವಹಿಸಿಕೊಳ್ಳುಂತೆ ಶೋಭಾ ಮನವಿ ಮಾಡಿದರು. ಆದರ ಬಯ್ಯಾಪುರ ವಾಗ್ದಾಳಿ ಮುಂದುವರಿಸಿದರು. ಸರಿ ದಾಖಲೆಗಳನ್ನಾದರೂ ನೀಡಿ. ಬಾಕಿಯಿರುವ ನಿಮ್ಮ ಕೆಲಸ ಏನಿದೆಯೋ ನೋಡೋಣ. ಆಧಿಕಾರಿಗಳಿಗೆ ಈಗಲೇ ಹೇಳಿ, ಕೆಲಸ ಮಾಡಿಸಿಕೊಡುವೆ ಎಂದು ಶೋಭಾ ವಿನಂತಿಸಿದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಬಯ್ಯಾಪುರ, 'ದಿಢೀರನೆ ದಾಖಲೆಗಳನ್ನು ಕೇಳಿದರೆ ಎಲ್ಲಿಂದ ತಂದುಕೊಡಲಿ' ಎಂದು ಜೋರು ದನಿಮಾಡುತ್ತಾ ಸಭೆಯನ್ನು ಬಹಿಷ್ಕರಿಸಿ, ಹೊರನಡೆದರು.












Click it and Unblock the Notifications