ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಲ್ ಗೆದ್ದ ವೀರನಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

By Prasad
|
Google Oneindia Kannada News

BS Yedduyrappa lifts KPL Cup
ಬೆಂಗಳೂರು, ಮೇ 23 : ಅಂಪೈರ್ ಗಳ ಮೇಲೆ ಒತ್ತಡ ತಂತ್ರ ಹೇರಿ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ ಬಿಜೆಪಿ ತಂಡದ ನಾಯಕ ಬಿಎಸ್ ಯಡಿಯೂರಪ್ಪನವರನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.

ದೆಹಲಿಯಿಂದ ದಿಗ್ವಜಯಿಯಾಗಿ ಹಿಂದಿರುಗಿದ ಯಡಿಯೂರಪ್ಪನವರನ್ನು ಬಳ್ಳಾರಿ ರಸ್ತೆಯಲ್ಲಿನ ಬ್ಯಾಟರಾಯನಪುರದಿಂದ ಹೆಬ್ಬಾಳ, ಮೇಖ್ರಿ ವೃತ್ತ, ಕಾವೇರಿ ವೃತ್ತ, ಭಾಷ್ಯಂ ವೃತ್ತ, ಪಿಟೀಲು ಚೌಡಯ್ಯ ಭವನದ ಮುಖಾಂತರ ಬಿಜೆಪಿಯ ಹೊಸ ಕಚೇರಿಗೆ ತೆರೆದ ವಾಹನದಲ್ಲಿ ಕರೆತರಲಾಯಿತು.

ಈ ಮೆರವಣಿಗೆಯಿಂದಾಗಿ ಟ್ರಾಫಿಕ್ ಜಾಮ್ ಆಗಿ ಅಮೂಲ್ಯ ಮತ ನೀಡಿದ ಮತದಾರರಿಗೇ ತೊಂದರೆಯಾಗುತ್ತದೆಂಬುದನ್ನು ಮುಖ್ಯಮಂತ್ರಿಗಳು ಗಮನಿಸಿದ್ದರೆ ಚೆನ್ನಾಗಿತ್ತು. ರಸ್ತೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ವಾಹನ ಸಂಚಾರಕ್ಕೂ ಭಾರೀ ಅಡತಡೆಯಾಯಿತು.

ತೆರೆದ ವಾಹನದಲ್ಲಿ ಯಡಿಯೂರಪ್ಪನವರ ಜೊತೆ ಆರ್ ಅಶೋಕ್, ಕೆಎಸ್ ಈಶ್ವರಪ್ಪ, ಸಿಟಿ ರವಿ, ಕಟ್ಟಾ ಸುಬ್ರಮಣ್ಯ ನಾಯ್ಡು, ಸದಾನಂದ ಗೌಡ ಮುಂತಾದವರು ಹಾಜರಿದ್ದು ಯಡಿಯೂರಪ್ಪನವರನ್ನು ಕರೆತಂದರು. ಬಿಜೆಪಿ ಕಚೇರಿ ಎದುರಿನಲ್ಲಿ ಪಟಾಕಿ ಸಿಡಿಸಿ, ಸ್ವೀಟ್ ಹಂಚಿ ಸಂಭ್ರಮಿಸಲಾಯಿತು.

ಪಂದ್ಯ ಗೆದ್ದಿದ್ದರೂ ನ್ಯಾಯಯುತವಾಗಿ ಆಟ ಆಡದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಅಂಪೈರ್ ಚಿದಂಬರಂ ಮೇಲೆ ಯಡಿಯೂರಪ್ಪ ಇನ್ನಷ್ಟು ಒತ್ತಡ ಹೇರಿದ್ದಾರೆ. ಇದಕ್ಕೆ ಕ್ಯಾರೆ ಅನ್ನದ ಚಿದಂಬರಂ ನೀವು ಆಡಿದ್ದೂ ಫೇರ್ ಪ್ಲೇ ಏನಲ್ಲ ಎಂದು ಗದರಿಸಿ ಕಳಿಸಿದ್ದಾರೆ.

ಪಂದ್ಯ ಗೆದ್ದಿದ್ದರೂ ಟ್ರೋಫಿ ಪಡೆಯುವಲ್ಲಿ ಸಂಪೂರ್ಣ ಸಫಲರಾಗದ ಯಡಿಯೂರಪ್ಪ, ರಾಜ್ಯಪಾಲರ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಮತ್ತೆ ಕಹಳೆಯೂದಿದ್ದಾರೆ. ಆದರೆ, ಜಗಳ ಯಾಕೆ ಸುಮ್ನೆ ಫ್ರೆಂಡ್ಲಿ ಮ್ಯಾಚ್ ಆಡಿಕೊಂಡು ಸುಖವಾಗಿರಿ ಎಂದು ವಾಪಸ್ ಕಳಿಸಿದ್ದಾರೆ.

ರಾಜ್ಯಪಾಲರು ಎಸೆದ ಗೂಗ್ಲಿಗೆ ಉತ್ತರ ಹೇಳಲು ತಡಕಾಡಿ, ಸೋಲಿನ ಅಂಚಿಗೆ ಬಂದು ನಿಂತಿದ್ದ ಯಡಿಯೂರಪ್ಪನವರಿಗೆ ಬೆಂಬಲ ನೀಡಿದ ಬಿಜೆಪಿ ನಾಯಕರಿಗೆ ಮತ್ತು ಅಂತಿಮ ಕ್ಷಣದಲ್ಲಿ ಹಾಗೂ ಹೀಗೂ ಗೆಲ್ಲಲು ಸಹಕರಿಸಿದ ಅಂಪೈರ್ ಗಳಿಗೆ ಧನ್ಯವಾದಗಳನ್ನು ಹೇಳುವುದನ್ನು ಯಡಿಯೂರಪ್ಪ ಮರೆಯಲಿಲ್ಲ.

ಯಡಿಯೂರಪ್ಪನವರು ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಗೆದ್ದಿದ್ದಾರೆ ಎಂದು ಅಂಪೈರ್ ಚಿದಂಬರಂ ಘೋಷಿಸಿದ್ದರೂ, ವಿರೋಧ ಪಕ್ಷದ ಹಂಸರಾಜ್ ಭಾರದ್ವಾಜ್ ಸೋತಿದ್ದಾರೆ ಎಂದು ಒಪ್ಪಲು ತಯಾರಿಲ್ಲದ್ದರಿಂದ ಗೆದ್ದವರಿಗೆ ಭಾರೀ ಇರುಸುಮುರುಸಾಗಿದೆ.

English summary
Karnataka chief minister BS Yeddyrappa gets tumultous welcome at Devenahalli internation airport by BJP activists. Though umpire P Chidambaram has declared Yeddyurappa a winner of KPL cup, he has refused to declare Hansraj Bhardwaj a loser. So, the war sovereignty continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X