ಇಂಗು ತಿಂದ ಮಂಗನಂತಾದ ಗವರ್ನರ್ ರಾಜೀನಾಮೆ ?

ವಾಸ್ತವವಾಗಿ, ಭಾರದ್ವಾಜ್ ಭರ್ಜರಿ ಬರ್ತ್ ಡೆ ಗಿಫ್ಟ್ ಅನ್ನು ನಿರೀಕ್ಷಿಸಿದ್ದರು. ಆದರೆ ಯಡಿಯೂರಪ್ಪ ಸರಕಾರವನ್ನು ಕಿತ್ತೊಗೆಯುವ ಅವರ ಪ್ರಯತ್ನಕ್ಕೆ ಪಾಪ ಕಾಂಗ್ರೆಸ್ ಹೈಕಮಾಂಡ್ ಈ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹುಟ್ಟುಹಬ್ಬದಂದು ಭಾರದ್ವಾಜ್ ನಿಜಕ್ಕೂ ಭಾರವಾದ ಹೃದಯವನ್ನೇ ಹೊರುವಂತಾಗಿದೆ. ರಾಜ್ಯಪಾಲರ ವರದಿಯಿಂದ ಸಿಟ್ಟು ಮಾಡಿಕೊಂಡು ದೆಹಲಿಯಲ್ಲಿ ಜಂಡಾ ಹೂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಂಡ್ ಕೊ, ಭಾರದ್ವಾಜ್ ಗೆ ವ್ಯಂಗ್ಯವಾಗಿ ಶುಭಕೋರಿದ್ದಾರೆ. ಜನ್ಮದಿನದ ಕೇಕ್ ನಿರೀಕ್ಷೆಯಲ್ಲಿದ್ದ ಭಾರದ್ವಾಜ್ ಗೆ ಬಿಜೆಪಿಯ ಕೇಕೆ ಕರ್ಕಶವಾಗಿ ಕೇಳತೊಡಗಿದೆ. ಇದರಿಂದ ರಾಜೀನಾಮೆ ಬಿಸಾಕುವ ಗುಂಗಿನಲ್ಲಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಚಿತಾವಣೆ ಮೇರೆಗೆ ಪಾಪ ಭಾರದ್ವಾಜ್ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದರು. ಆದರೆ ಪ್ರಜೆಗಳನ್ನು ಮಂಗ್ಯಾ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಅಪ್ಪ-ಮಗ ಜೋಡಿಯೊಂದು ಈ ಬಾರಿ ರಾಜ್ಯದ ಮೊದಲ ಪ್ರಜೆಯನ್ನೇ ಮಂಗ್ಯಾ ಮಾಡಿದೆ ಎಂಬುದು ಕುಹಕ.
ಅಲ್ಲಿಗೆ ಒಂದೇ ವರ್ಷದಲ್ಲಿ ಎರಡನೆ ಬಾರಿಗೆ ಭಾರದ್ವಾಜ್ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ಮುಖಭಂಗಕ್ಕೆ ಈಡಾಗಿರುವ ಭಾರದ್ವಾಜ್ ಅವರನ್ನು ಕೇಂದ್ರಕ್ಕೆ ವಾಪಸು ಕರೆಸಿಕೊಳ್ಳವುದೋ ಅಥವಾ ವಿಆರ್ಎಸ್ ನೀಡುವುದೋ ಎಂದು ಕೇಂದ್ರ ಸರಕಾರ ಆಲೋಚಿಸುತ್ತಿದೆ. ಏಕೆಂದರೆ ಸ್ವತಃ ಗೃಹ ಸಚಿವರೂ ಸೇರಿದಂತೆ ದೆಹಲಿ ಕಾಂಗ್ರೆಸ್ ನಲ್ಲಿ ಬಹಳಷ್ಟು ಮಂದಿ ರಾಜ್ಯಪಾಲರು ಹೇಳುವಂತೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಷರಾ ಬರೆದಿದ್ದಾರೆ.












Click it and Unblock the Notifications