ಅಲ್ಪಸಂಖ್ಯಾತರ ಅಭಿವೃದ್ಧಿಗೆ 155 ಕೋಟಿ ರೂಪಾಯಿ

ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ಸರಕಾರ ಬಿಡುಗಡೆ ಮಾಡಿದ ಹಣವು ಮುಸ್ಲಿಂ ಸಮುದಾಯಕ್ಕೆ ನೆರವಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ) ಚೇರ್ಮನ್ ಎನ್. ಬಿ. ಅಬೂಬಕರ್ ಹೇಳಿದ್ದಾರೆ. ಸರಕಾರವು ರೂಪಿಸಿದ ಹಲವು ಯೋಜನೆಗಳಾದ ಅರಿವು, ಸ್ವಾವಲಂಬನಾ, ಶ್ರಮ ಶಕ್ತಿ, ಗಂಗಾ ಕಲ್ಯಾಣ ಇತ್ಯಾದಿಗಳಿಂದ ಅಗತ್ಯ ಅವಶ್ಯಕತೆಗಳಿಗಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸುಲಭವಾಗಿ ಸಾಲಗಳನ್ನು ಪಡೆಯುವಂತಾಗಿದೆ ಎಂದರು.
ಇದರಲ್ಲಿ ಸುಮಾರು 6.1 ಕೋಟಿ ರು. ಕೃಷಿ ಭೂಮಿ ಖರೀದಿಗೆ ವಿನಿಯೋಗವಾಗಿದೆ. ಅರಿವು ಯೋಜನೆಯನ್ವಯ ಕಳೆದ ಎರಡು ವರ್ಷ ಹತ್ತು ತಿಂಗಳಲ್ಲಿ 45.49 ಕೋಟಿ ರೂ. ಸಾಲ ನೀಡಲಾಗಿದೆ. ಇದರಲ್ಲಿ 3 ಕೋಟಿ ರೂ. ಎನ್ಎಂಡಿಎಫ್ ಸಿ ನೀಡಿದೆ. ಸಣ್ಣ ಸಾಲ ಯೋಜನೆಯಡಿ ಸುಮಾರು 26.95 ಕೋಟಿ ರೂ. ನೀಡಲಾಗಿದೆ. ಇದೇ ಯೋಜನೆಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2.3 ಕೋಟಿ ರು. ನೀಡಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಎಲ್ಲಾ ಭಾಗದಲ್ಲೂ ಜಿಲ್ಲಾವಾರು ಕೆಎಂಡಿಸಿ ಶಾಖೆಗಳನ್ನು ತೆರೆಯುವ ಉದ್ದೇಶವಿರುವುದಾಗಿ ಅಬೂಬಕರ್ ಹೇಳಿದ್ದಾರೆ. ಸಾಲ ಹಿಂಪಡೆಯುವಲ್ಲಿ ಹಿನ್ನಡೆಯಾಗುತ್ತಿದೆ ಎಂಬ ಪ್ರಶ್ನೆಗೆ ಅವರು ಸಕಾಲದಲ್ಲಿ ಸಾಲ ವಾಪಸ್ಸು ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಹಿಂದೆ ಸಾಲ ವಾಪಸ್ಸಾತಿ ತಿಂಗಳಿಗೆ 30 ಲಕ್ಷ ರೂ. ಇತ್ತು. ಇದೀಗ ತಿಂಗಳಿಗೆ ಒಂದು ಕೋಟಿ ರು.ಗೆ ತಲುಪಿದೆ ಎಂದರು.












Click it and Unblock the Notifications