ಕೆವಿ ಕಾಮತ್, ಇನ್ಪೊಸಿಸ್ ಹೊಸ ಛೇರ್ಮನ್

ಭಾರತದ ಎರಡನೇ ಅತೀ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಗೆ ಐಸಿಐಸಿಐ ಬ್ಯಾಂಕ್ ನ ನಾನ್ ಎಕ್ಸಿಕ್ಯುಟೀವ್ ಡೈರೆಕ್ಟರ್ ಮತ್ತು ಇನ್ಫೋಸಿಸ್ ನ ಸ್ವತಂತ್ರ ನಿರ್ದೇಶಕ ಆಗಿರುವ ಎಂವಿ ಕಾಮತ್ ಅವರನ್ನು ಇನ್ಫೋಸಿಸ್ ಚೇರ್ಮನ್ ಆಗಿ ನಿರ್ದೇಶಕ ಮಂಡಳಿ ಏ.30ರಂದು ಆಯ್ಕೆ ಮಾಡಿತು. ಎಂವಿ ಕಾಮತ್ ಮತ್ತು ಇನ್ಫೋಸಿಸ್ ನ ಸಂಸ್ಥಾಪಕರಲ್ಲೊಬ್ಬರಾಗಿರುವ ಎಸ್ 'ಕ್ರಿಸ್' ಗೋಪಾಲಕೃಷ್ಣನ್ ಅವರ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಸಿಇಓ ಮತ್ತು ಮಂಡಳಿ ಸದಸ್ಯರಾಗಿರುವ ಎಸ್ ಡಿ ಶಿಬುಲಾಲ್ ಅವರು ಕೂಡ ಈ ಪ್ರತಿಷ್ಠಿತ ಪದವಿಯ ಆಕಾಂಕ್ಷಿಯಾಗಿದ್ದರು.
ಸುಮಾರು ಒಂದು ವರ್ಷದ ಹಿಂದೆಯೇ ನಿವೃತ್ತಿಯ ಇಂಗಿತವನ್ನು ಎನ್ಆರ್ಎನ್ ಅವರು ವ್ಯಕ್ತಪಡಿಸಿದ್ದರು. ನಾರಾಯಣಮೂರ್ತಿ ಅವರ ಉತ್ತರಾಧಿಕಾರಿ ಯಾರಾಗಿರಬೇಕು, ಯಾರಿಗೆ ಆ ಸಾಮರ್ಥ್ಯವಿದೆ ಎಂಬ ಕುರಿತು ಇನ್ಫೋಸಿಸ್ ನಿರ್ದೇಶಕ ಮಂಡಳಿ ಆಂತರಿಕವಾಗಿ ಸಾಕಷ್ಟು ಚರ್ಚೆ ನಡೆಸಿತ್ತು. ಆಗಸ್ಟ್ 21ರಂದು ನಾರಾಯಣಮೂರ್ತಿಯವರು ಕಾಮತ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಇನ್ಫಿ ಕಂಪನಿಯ ಅತ್ಯುನ್ನತ ಹುದ್ದೆಯ ಆಕಾಂಕ್ಷಿಗಳಾಗಿದ್ದವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಕೆವಿ ಕಾಮತ್ : ಐಸಿಐಸಿಐ ಬ್ಯಾಂಕ್ ನ ನಾನ್ ಎಕ್ಸಿಕ್ಯುಟೀವ್ ಡೈರೆಕ್ಟರ್ ಆಗಿರುವ ಎಂವಿ ಕಾಮತ್ ಅವರನ್ನು ನಿರ್ದೇಶಕ ಮಂಡಳಿಯ ಹೆಚ್ಚುವರಿ ನಿರ್ದೇಶಕರನ್ನಾಗಿ ಇನ್ಫೋಸಿಸ್ 2009ರಲ್ಲಿ ಬರಮಾಡಿಕೊಂಡಿತ್ತು. ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಕಾಮತ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಅಹ್ಮದಾಬಾದ್ ಡಿಗ್ರಿ ಕೂಡ ಪಡೆದಿದ್ದಾರೆ. 1971ರಲ್ಲಿ ಐಸಿಐಸಿಐ ಸೇರಿದ್ದ ಕಾಮತ್ 2009 ಏಪ್ರಿಲ್ ನಲ್ಲಿ ಭಾರತದ ಎರಡನೇ ಅತಿದೊಡ್ಡ ಖಾಸಗಿ ಹಣಕಾಸು ಕಂಪನಿಯಿಂದ ನಿವೃತ್ತರಾಗಿದ್ದರು. ಕಾಮತ್ ಅವರು 2007ರಲ್ಲಿ ಫೋರ್ಬ್ಸ್ ಏಷ್ಯಾದ 'ಬಿಸಿನೆಸ್ ಮ್ಯಾನ್ ಆಫ್ ದಿ ಇಯರ್' ಮತ್ತು ದಿ ಎಕಾನಾಮಿಕ್ ಟೈಮ್ಸ್ ನ 'ಬಿಸಿನೆಸ್ ಲೀಡರ್ ಆಪ್ ದಿ ಇಯರ್' ಪ್ರಶಸ್ತಿ ಪಡೆದಿದ್ದರು. ಐಸಿಐಸಿಐ ಕಂಪನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೇರಲು ಅವರ ಕಾಣಿಕೆ ಅಪಾರ.
ಎಸ್ ಗೋಪಾಲಕೃಷ್ಣನ್ : ಆರಂಭದ ದಿನಗಳಿಂದಲೂ ಇನ್ಫಿಯೊಂದಿಗಿರುವ ಎಸ್ 'ಕ್ರಿಸ್' ಗೋಪಾಲಕೃಷ್ಣನ್ 2007ರಲ್ಲಿ ಇನ್ಫೋಸಿಸ್ ನ ಸಿಇಓ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕವಾಗಿದ್ದರು. ಜಾಗತಿಕ ನಾಯಕರಾಗಿ ಗುರುತಿಸಿಕೊಂಡಿರುವ ಕ್ರಿಸ್, ಚೀಫ್ ಆಪರೇಟಿಂಗ್ ಆಫೀಸರ್, ಅಧ್ಯಕ್ಷ ಮತ್ತು ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಮದ್ರಾಸ್ ನಲ್ಲಿ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಗೋಪಾಲಕೃಷ್ಣನ್ ಪಡೆದಿದ್ದಾರೆ. ಇದೇ ವರ್ಷ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್ ಡಿ ಶಿಬುಲಾಲ್ : ಪುಣೆಯಲ್ಲಿ ಇನ್ಫೋಸಿಸ್ ಎಂಬ ಸಂಸ್ಥೆಯನ್ನು 1981ರಲ್ಲಿ ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಕೆ ದಿನೇಶ್ ಮತ್ತು ಎನ್ಎಸ್ ರಾಘವನ್ ಜೊತೆ ಎನ್ಆರ್ ನಾರಾಯಣಮೂರ್ತಿ ಕಟ್ಟಿದಾಗ ಅವರ ಜೊತೆಯಲ್ಲಿದ್ದವರು ಎಸ್ ಡಿ ಶಿಬುಲಾಲ್. ಕೇರಳದ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ ಪದವಿ ಪಡೆದಿರುವ ಶಿಬುಲಾಲ್, ಯುನಿವರ್ಸಿಟಿ ಆಫ್ ಬೋಸ್ಟನ್ ನಿಂದ ಕಂಪ್ಯೂಟರ್ ಸೈನ್ಸ್ ಎಮ್ಎಸ್ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಸೋಲ್ ಇಂಟರ್ನ್ಯಾಷನಲ್ ಬಿಸಿನೆಸ್ ಅಡ್ವೈಸರಿ ಕೌನ್ಸಿಲ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.












Click it and Unblock the Notifications