ಕಚೇರಿ ಉದ್ಘಾಟನೆಗಷ್ಟೇ ಸೀಮಿತವಾದ ಆಡ್ವಾಣಿ ಭೇಟಿ
ಗಮನಾರ್ಹವೆಂದರೆ, ಹಿರಿಯ ನಾಯಕನ ಬೆಂಗಳೂರು ಭೇಟಿಯು ಉದ್ಘಾಟನೆಗಷ್ಟೇ ಸೀಮಿತಗೊಂಡಿತ್ತಾದರೂ ಉದ್ಘಾಟನೆಯ ವೇಳೆ ನೆರೆದಿದ್ದ ಪಕ್ಷದ ಕಾರ್ಯಕರ್ತರಿಗೆ 'ಕಚೇರಿ ಕಟ್ಟಿದ್ದು ಆಯಿತು. ಇದರ ಜತೆಗೆ ಪಕ್ಷವನ್ನೂ ಕಟ್ಟಲೂ ಶ್ರಮಿಸಿ' ಎಂದು ಚುಟುಕಾಗಿ ಹೇಳಿ ಮಾತು ಮುಗಿಸಿದರು.
ಕುತೂಹಲದ ಸಂಗತಿಯೆಂದರೆ ಅವರು ಪಕ್ಷದ ಭಿನ್ನಮತೀಯರು, ಸಚಿವರು, ಪಕ್ಷದ ನಾಯಕರು ಕೊನೆಗೆ ಮಾಧ್ಯಮದವರನ್ನೂ ಭೇಟಿಯಾಗದೆ ವಾಪಸಾದರು. ಪಕ್ಷದ ಹಲವು ಶಾಸಕರು, ಸಂಸದರು ಅಡ್ವಾಣಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರು ನೀಡಲು ಹೊಂಚುಹಾಕಿದರಾದರೂ ಪಕ್ಷದ ಅಧ್ಯಕ್ಷ ಈಶ್ವರಪ್ಪ ಅವರು ಜಪ್ಪಯ್ಯ ಅಂದರೂ ಅದಕ್ಕೆ ಅವಕಾಶ ನೀಡಲಿಲ್ಲ.
ವಾಸ್ತವವಾಗಿ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಕೊತಕೊತನೆ ಕುದಿಯುತ್ತಿರುವ ಬಗ್ಗೆ ಸ್ಪಷ್ಟ ಅರಿವು ಹೊಂದಿರುವ ಅಡ್ವಾಣಿ ಬೆಂಗಳೂರು ಭೇಟಿಗೆ ಒಲವು ಹೊಂದಿರಲಿಲ್ಲ. ಬಹಳ ಹಿಂದೆಯೇ ಭೇಟಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಇತ್ತೀಚೆಗೆ ಯಡಿಯೂರಪ್ಪ ವಿರುದ್ಧ ಆರೋಪಗಳು ಹೆಚ್ಚಾದಾಗ ಬೆಂಗಳೂರು ಭೇಟಿಯನ್ನು ರದ್ದುಪಡಿಸುವ ಬೆದರಿಕೆಯೊಡ್ಡಿದ್ದರು. ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತಕುಮಾರ್, ಸದಾನಂದ ಗೌಡ ಮುಂತಾದವರು ಉಪಸ್ಥಿತರಿದ್ದರು.