ಸಾಯಿಬಾಬಾ ನಿಕಟವರ್ತಿ ಮತ್ತು ವೈದ್ಯರಿಗೆ ಪ್ರಾಣ ಬೆದರಿಕೆ
ಒಂದು ಮೂಲದ ಪ್ರಕಾರ, ಸಾಯಿಬಾಬಾ ಅವರ ಸಕಲ ಬೇಕುಬೇಡಗಳನ್ನು ಪೂರೈಸುತ್ತಿದ್ದ ಸತ್ಯಜಿತ್ ಮತ್ತು ಬಾಬಾ ಅವರ ವೈಯಕ್ತಿಕ ವೈದ್ಯರಾಗಿದ್ದ ಡಾ. ಐಯ್ಯರ್ ಅವರ ಪ್ರಾಣಕ್ಕೆ ಅಪಾಯ ಕಾದಿದೆ. ಅನೇಕ ಕಡೆಗಳಿಂದ ಅವರಿಗೆ ಬೆದರಿಕೆಯ ಕರೆಗಳು ಬರುತ್ತಿವೆ. ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಬಹಿರಂಗವಾಗಿ ಕಾಣಿಸಬಾರದು ಎಂದು ರಾಜ್ಯ ಸರಕಾರ ಅವರಿಗೆ ತಾಕೀತು ಮಾಡಿದೆ.
ಶ್ರೀ ಸತ್ಯ ಸಾಯಿ ಟ್ರಸ್ಟ್ ಗೆ ಸತ್ಯಜಿತ್ ಅವರ ಹೆಸರು ಕೇಳಿ ಬರುತ್ತಿರುವುದೇ ಅವರಿಗೆ ಬೆದರಿಕೆ ಕರೆ ಬರಲು ಕಾರಣ ಎನ್ನಲಾಗಿದೆ. ಸತ್ಯಜಿತ್ ಅವರಿಗೆ ಟ್ರಸ್ಟ್ ನ ಬಹುತೇಕ ಎಲ್ಲ ಸದಸ್ಯರ ಬೆಂಬಲವಿದೆ. ಇನ್ನು, ಐಯ್ಯರ್ ಅವರಿಗೆ ಬಾಬಾ ಸಾಯುವುದಕ್ಕೂ ಮೊದಲಿನಿಂದಲೇ ಬೆದರಿಕೆಯ ಕರೆಗಳು ಬರುತ್ತಿದ್ದವು. ಬಾಬಾ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಅವರು ಇಟ್ಟಿಲ್ಲ ಎಂಬುದೇ ಅವರ ಮೇಲಿನ ಪ್ರಮುಖ ಆರೋಪ.
ಜೊತೆಗೆ ಸಾಯಿಬಾಬಾ ಅವರ ನಿಕಟವರ್ತಿಗಳಾಗಿದ್ದ ಕೆಲವರನ್ನು ಮುಗಿಸಿಹಾಕುವ ಸಂಚು ಕೂಡ ನಡೆದಿದೆ ಎಂದು ಬೇಹುಗಾರಿಕಾ ವರದಿ ತಿಳಿಸಿದೆ. ಈ ಕಾರಣ ಪುಟ್ಟಪರ್ತಿಯಲ್ಲಿ ಟ್ರಸ್ಟ್ ಸದಸ್ಯರಿಗೆಲ್ಲ ಭಾರೀ ಭದ್ರತೆಯನ್ನು ನೀಡಲಾಗಿದೆ. ಪ್ರಶಾಂತಿ ನಿಲಯಂನಲ್ಲಿ ಸದ್ಯಕ್ಕಂತೂ ಶಾಂತಿ ನೆಲೆಸಿಲ್ಲ. ಈ ನಡುವೆ, ಸಾಯಿಬಾಬಾ ಅವರ ಅಂತ್ಯ ಸಂಸ್ಕಾರಕ್ಕಾಗಿ ಏರ್ಪಾಡುಗಳು ಭರದಿಂದ ಸಾಗಿವೆ.