ನಕಲಿ ಪರ್ಮಿಟ್ ಬಳಸಿ ಅದಿರು ಸಾಗಣೆ, ಓರ್ವನ ಬಂಧನ

ಬಂಧಿತ ವ್ಯಕ್ತಿ ಸಂಡೂರು ತಾಲೂಕಿನ ಯಶವಂತನಗರ ರೈಲ್ವೆ ಯಾರ್ಡ್ ಗುತ್ತಿಗೆದಾರನ ಬಳಿ ಕೆಲಸ ಮಾಡುವ ಖಾಜಾ ಹುಸೇನ್ (40). ಇನ್ನು ಸಂಡೂರಿನ ಕಾಗೆ ಮಂಜು (25), ಮಹಾಬಲಿ (40) ಮುನೀರ್ ಅವರು ಸೇರಿ ಕಿಶೋರ್ ಟ್ರಾನ್ಸ್ಪೋರ್ಟ್ ಕಂಪನಿ ಮತ್ತು ಮಾಲೀಕರ ವಿರುದ್ಧ ಕಳ್ಳತನ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ.
ರಾಜ್ಯ ಸರ್ಕಾರ ಮತ್ತು ಗಣಿ ಕಂಪನಿಗಳು ಬೆಚ್ಚಿ ಬೀಳುವಂಥಹ ಜಾಲ ಇದಾಗಿದ್ದು, ವಿವಾದ ಇಷ್ಟೆಲ್ಲಾ ದೊಡ್ಡಮಟ್ಟದಲ್ಲಿದ್ದರೂ ಕೂಡ ರಾಜಾರೋಷವಾಗಿ ನಕಲಿ ಪರ್ಮಿಟ್ಗಳನ್ನು ಬಳಕೆ ಮಾಡಿ ಸರ್ಕಾರವೇ ಜಪ್ತಿ ಮಾಡಿದ್ದ ಕಬ್ಬಿಣದ ಅದಿರನ್ನು ಯಶವಂತನಗರ ರೈಲ್ವೆ ಯಾರ್ಡ್ ಮೂಲಕ ಆಂಧ್ರಕ್ಕೆ ರವಾನೆ ಮಾಡುತ್ತಿದ್ದುದು ಇಡೀ ಜಿಲ್ಲೆಯನ್ನೇ ಅಚ್ಚರಿಗೊಳಿಸಿದೆ. ಈ ಯಾರ್ಡ್ನಲ್ಲಿ ಕಬ್ಬಿಣದ ಅದಿರಿನ ಅನೇಕ ಕಂಪನಿಗಳು ಅದಿರನ್ನು ಗೂಡ್ಸ್ ಮೂಲಕ ರವಾನೆ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಣಿ ಉದ್ಯಮಕ್ಕೆ ಯಶವಂತನಗರ ರೈಲ್ವೆ ಯಾರ್ಡ್ ಅತ್ಯಂತ ಮುಖ್ಯ ಲೋಡಿಂಗ್ ಕೇಂದ್ರ.
ಸಂಡೂರು ತಹಸೀಲ್ದಾರ್ ನೇತೃತ್ವದ ಟಾಸ್ಕ್ಫೋರ್ಸ್ ತಂಡ ವಿವಿಧ ಸಂದರ್ಭಗಳಲ್ಲಿ ದಾಳಿ ನಡೆಸಿ, ವಶಪಡಿಸಿಕೊಂಡಿದ್ದ ಡಿಗ್ಗಿಂಗ್ ಅದಿರನ್ನು ಬುಧವಾರ ರಾತ್ರಿ ಹಲವರು ಕಳ್ಳತನ ಮಾಡಿ ಗೂಡ್ಸ್ ರೇಕ್ಗಳಲ್ಲಿ 6 ಕೋಟಿ ರು. ಬೆಲೆಯ 4000 ಮೆಟ್ರಿಕ್ ಟನ್ ಪ್ರಮಾಣದ ಅದಿರನ್ನು ತುಂಬಿದ್ದರು. ಇನ್ನೇನು ಈ ಗೂಡ್ಸ್ ಅದಿರನ್ನು ಸಾಗಿಸಲು ಇಂಜಿನ್ ಸ್ಟಾರ್ಟ್ ಮಾಡುವಾಗಲೇ, ಅಧಿಕಾರಿಗಳಿಗೆ ದಾಳಿ ಮಾಡಿದರು.
ಸಹಾಯಕ ಅರಣ್ಯ ಅಧಿಕಾರಿ ಜಿ. ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವೊಂದು ಸ್ಥಳಕ್ಕೆ ಧಾವಿಸಿಬಂದು ಅದಿರು ತುಂಬಿದ್ದ ಗೂಡ್ಸನ್ನು ತಡೆದು, ದಾಖಲೆಗಳನ್ನು ಪರಿಶೀಲಿಸಿದಾಗಲೇ ನಕಲಿ ಪರ್ಮಿಟ್ಗಳ ಜಾಲ ಬೆಳಕಿಗೆ ಬಂದಿದ್ದು. ಗೂಡ್ಸ್ಗೆ ಅದಿರನ್ನು ತುಂಬಿಸಲು ಕಿಶೋರ್ ಟ್ರಾನ್ಸ್ಪೋರ್ಟ್ ರೈಲ್ವೆಗೆ ಶುಲ್ಕ ಪಾವತಿ ಮಾಡಿದ್ದು, ಗಡಿಗೆ ಮೈನ್ಸ್ ಅಂಡ್ ಮಿನರಲ್ಸ್ ಕಂಪನಿ ಹೆಸರಿನ ಪರ್ಮಿಟ್ ಸಂಖ್ಯೆ 4728 ಸಲ್ಲಿಸಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಸಂಖ್ಯೆಯ ಪರ್ಮಿಟ್ ಅನ್ನು ವಿಎಸ್ ಲಾಡ್ ಕಂಪನಿಗೆ ಫೆಬ್ರವರಿಯಲ್ಲಿ ನೀಡಿದ್ದು, ಈ ಗೂಡ್ಸ್ಗೆ ಸಲ್ಲಿಕೆ ಆಗಿರುವ ಪರ್ಮಿಟ್ ನಕಲಿಯದಾಗಿತ್ತು.
ಸಹಾಯಕ ಅರಣ್ಯ ಅಧಿಕಾರಿ ಜಿ. ವೆಂಕಟೇಶ್ ಅವರು ತನಿಖೆಯನ್ನು ಮುಂದುವರೆಸಿ, ಗೂಡ್ಸ್ನಲ್ಲಿಯ ಅದಿರು ಟಾಸ್ಕ್ಫೋರ್ಸ್ಗೆ ಸಂಬಂಧಿಸಿದ್ದು. ಕಳ್ಳತನದ ಮೂಲಕ ಅದಿರನ್ನು ಗೂಡ್ಸ್ಗೆ ಲೋಡ್ ಮಾಡಿದ್ದು ಆಂಧ್ರದ ಮೇಡಕ್ ಜಿಲ್ಲೆಯ ಕಾವೇರಿ ಇಂಡಿಯಾ ಸ್ಟೀಲ್ ಇಂಡಸ್ಟ್ರೀಸ್ಗೆ ರವಾನೆ ಮಾಡಲಾಗುತ್ತಿತ್ತು ಎನ್ನುವುದನ್ನು ಖಚಿತಪಡಿಸಿಕೊಂಡು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.












Click it and Unblock the Notifications