ಕರ್ನಾಟಕ ಪ್ರವಾಸಕ್ಕೆ ರಾಹುಲ್ ಗಾಂಧಿ ಸಜ್ಜು
ಬುಧವಾರ ಬೆಳಗ್ಗೆ ಬಿಜಾಪುರಕ್ಕೆ ಭೇಟಿ, ಉಪಹಾರ ಸೇವನೆ, ನಂತರ ಮಧ್ಯಾಹ್ನ ಉಡುಪಿಯಲ್ಲಿ ಊಟ ಮತ್ತು ಸಂಜೆ ಬೆಂಗಳೂರಿನಲ್ಲಿ ತಿಂಡಿ ಮಧ್ಯೆ ಮಧ್ಯೆ ಯುವ ಜನರ ಜೊತೆಗೆ ಖಾಸಗಿ ಸಂವಾದ, ಯುವ ಕಾಂಗ್ರೆಸ್ ಮಹತ್ವದ ಬಗ್ಗೆ ಬೋಧನೆ ಇವಿಷ್ಟು ರಾಹುಲ್ ಗಾಂಧಿ ದಿನಚರಿಯಲ್ಲಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರ ಜೊತೆಗೆ ಆಪ್ತ ಮಾತುಕತೆ ನಡೆಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿ ಬೂತ್ ಮಟ್ಟದಿಂದ ಒಬ್ಬರಂತೆ ಸುಮಾರು ಎರಡು ಸಾವಿರ ಯುವ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಾಂಗ್ರೆಸ್ ಮುಖಂಡರಾದ ಭಾಸ್ಕರ್ ಮೊಯ್ಲಿ, ಶಶಿಧರ್ ಹೆಗ್ಡೆ, ಸಂತೋಷ್ ಶೆಟ್ಟಿ, ಕೆ ಸುಧೀರ್ ಅವರು ಬಂಟ್ವಾಳಎಂಎಲ್ ಎ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಸದಸ್ಯತ್ವ ನೋಂದಣಿ ಅಭಿಯಾನವನ್ನು ರಾಹುಲ್ ಉದ್ಘಾಟಿಸಲಿದ್ದಾರೆ. ಸುಮಾರು 5 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಇಲ್ಲೆ ಇಳಿಯುವರೋ ಅಥವಾ ದೆಹಲಿಗೆ ತೆರಳುತ್ತಾರೋ ಗೊತ್ತಿಲ್ಲ. ಅವರ ಆಗಮನಕ್ಕೆ ನಾವು ಕಾದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳ ನೇಮಕಾತಿಯಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ರಾಹುಲ್ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.