2,000 ವರ್ಷದ ನಂತರ ಮಹಾಲಕ್ಷ್ಮಿಯರಿಗೆ ದರ್ಶನಭಾಗ್ಯ ಪ್ರಾಪ್ತಿ!

ಎನಿತು ಧನ್ಯಳೋ ತಾಯಿ! ದೇಶದ ಆರು ಶಕ್ತಿ ಪೀಠಗಳಲ್ಲಿ ಇಲ್ಲಿನ ದೇವತೆಯೂ ಒಂದು. ಕೊಲ್ಹಾಪುರವು ದಕ್ಷಿಣ ಕಾಶಿ ಎಂದೂ ಪ್ರಸಿದ್ಧಿ ಪಡೆದಿದೆ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಣೆಯಿಂದ 240 ಕಿ.ಮೀ. ದೂರದಲ್ಲಿ ಪಂಚಗಂಗಾ ನದಿ ತಟದಲ್ಲಿ ಈ ಪುರಾತನ ದೇವಾಲಯ ಸ್ಥಾಪಿತವಾಗಿದೆ. ಬೆಳಗಾವಿಯಿಂದ 100 ಕಿ.ಮೀ. ದೂರದಲ್ಲಿದೆ.
ಪ್ರತಿ ದಿನ ಬೆಳಗ್ಗೆ 10 ರಿಂದ 11.30ರವರೆಗೆ ಮಾತ್ರ ಮಹಿಳೆಯರಿಗೆ ಈ ದರುಶನ ಭಾಗ್ಯ ಪ್ರಾಪ್ತಿಯಾಗಿದೆ. ಸಾಂಕೇತಿಕವಾಗಿ, ಮಾತೆ ಮಹಾಲಕ್ಷ್ಮಿ ದರುಶನಕ್ಕಾಗಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ನೀತಾ ಕೇಳ್ಕರ್ ನೇತೃತ್ವದಲ್ಲಿ 10 ಮಹಿಳೆಯರ ಮೊದಲ ತಂಡ ಗರ್ಭಗುಡಿಯೊಳಕ್ಕೆ ಏಪ್ರಿಲ್ 13ರ ಬುಧವಾರ ಕಾಲಿಟ್ಟಿತು.
ಅಂದಹಾಗೆ, ಮಹಾರಾಷ್ಟ್ರದ ಗೃಹ ಖಾತೆ ಸಹಾಯಕ ಸಚಿವ ಸತೇಜ್ ಪಾಟೀಲ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಉನ್ನತಮಟ್ಟದ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಹನುಮಂತ ಸೂರ್ಯವಂಶಿ ತಿಳಿಸಿದ್ದಾರೆ. ಈ ಸುದ್ದಿಗೆ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದ್ದು ಭಾರತದ ನಾನಾ ಕಡೆಗಳಿಂದ ಅಮ್ಮನ ಭಕ್ತೆಯರು ಕೊಲ್ಹಾಪುರದತ್ತ ಧಾವಿಸಿ ಬರುತ್ತಿದ್ದಾರೆ.
ಮಹಿಳೆಯರು ತಂಡೋಪತಂಡವಾಗಿ ಗರ್ಭಗುಡಿಯೊಳಕ್ಕೆ ಹೆಜ್ಜೆ ಹಾಕುತ್ತಿದ್ದು, ಮಾತೆ ಮಹಾಲಕ್ಷ್ಮಿಗೆ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದುವರೆಗೆ ಗರ್ಭಗುಡಿಯ ಹೊರಗಡೆ ನಿರ್ದಿಷ್ಟ ಜಾಗದಿಂದ ಮಾತ್ರವೇ ಮಹಿಳೆಯರು ನಮಸ್ಕಾರ ಹಾಕಬೇಕಿತ್ತು. ಈ ಸಂಪ್ರದಾಯವು ಅನಾದಿಕಾಲದಿಂದಲೂ ಅಂದರೆ ಸುಮಾರು 2,000 ವರ್ಷದಿಂದ ಅನೂಚವಾಗಿ ನಡೆದುಬಂದಿತ್ತು.
ಗಮನಾರ್ಹವೆಂದರೆ ರಾಜಮಾತೆಯರಿಗೆ, ಅರ್ಚಕರ ಮನೆಯ ಹೆಣ್ಣುಮಕ್ಕಳಿಗೆ, ಖ್ಯಾತನಾಮರ ಕುಟುಂಬದವರಿಗೆ ಈ ನಿಷೇಧ ಅನ್ವಯವಾಗುತ್ತಿರಲಿಲ್ಲ. ಇನ್ನು, ನಿರ್ದಿಷ್ಟ ವರ್ಗದ ಜಾತಿಯವರಿಗೆ 1978ರವರೆಗೂ ಪ್ರವೇಶಾವಕಾಶ ನಿರಾಕರಿಸಲಾಗಿತ್ತು. ಅಂದಹಾಗೆ, ಕೊಲ್ಹಾಪುರದತ್ತ ತಮ್ಮ ಪ್ರಯಾಣ ಯಾವಾಗ?












Click it and Unblock the Notifications