ಮೂರು ದಿನ ದೆಹಲಿಯಲ್ಲಿ ಕುವೆಂಪು ಕಂಪು
1992ರಲ್ಲಿ ಕುವೆಂಪು ಪ್ರತಿಷ್ಠಾನವನ್ನು ಸ್ಥಾಪಿಸಿದ ಕರ್ನಾಟಕ ಸರ್ಕಾರವು ಕುವೆಂಪು ಸಾಹಿತ್ಯ ಕುರಿತು ವಿಚಾರ ಸಂಕಿರಣಗಳನ್ನು, ಕಾರ್ಯಾಗಾರಗಳನ್ನು, ಶಿಬಿರಗಳನ್ನು ನಡೆಸಿಕೊಂಡು ಬಂದಿದೆ. ಮುಂದಿನ ಜನಾಂಗಕ್ಕೆ ರಾಷ್ಟ್ರಕವಿ ಕುವೆಂಪು ಅವರ ಪರಿಚಯ ಮಾಡಿಕೊಡುವುದು ಹಾಗೂ ಕುಪ್ಪಳಿಯನ್ನು ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ಬೆಳೆಸುವುದು ಪ್ರತಿಷ್ಠಾನದ ಮುಖ್ಯ ಉದ್ದೇಶವಾಗಿದೆ. ಕುವೆಂಪು ಅವರನ್ನು ದೇಶದ ರಾಜಧಾನಿಯ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಕ್ರಮವನ್ನು ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಟಿ.ಎಸ್. ಸತ್ಯನಾಥ, ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಎಚ್.ಎಸ್.ಶಿವಪ್ರಕಾಶ್ ಹಾಗೂ ಕುವೆಂಪು ಪ್ರತಿಷ್ಠಾನದ ವಿದ್ವಾಂಸರು ನಡೆಸಿಕೊಡಲಿದ್ದಾರೆ.
ದಿನಾಂಕ 15 ಶುಕ್ರವಾರ : ಸಂಜೆ 5.30ಕ್ಕೆ ದೆಹಲಿ ಕರ್ನಾಟಕ ಸಂಘದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಅವರು ಜ್ಞಾನಪೀಠ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸತ್ ಸದಸ್ಯ ಡಿ.ಬಿ. ಚಂದ್ರೇಗೌಡ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ. ಮುರಿಗೆಪ್ಪ ಹಾಗೂ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ, ಡಾ. ವೆಂಕಟಾಚಲ ಹೆಗಡೆ ಅವರು ಇರುವರು. ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಕುವೆಂಪು ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾರೆ.
ದಿನಾಂಕ 16 ಶನಿವಾರ : ಬೆಳಗ್ಗೆ 10.30ಕ್ಕೆ, ಪ್ರಸಿದ್ಧ ಲೇಖಕಿ, ಪ್ರೊ. ಕಮಲಾ ಹಂಪನಾ ಅವರ ಅಧ್ಯಕ್ಷತೆಯಲ್ಲಿ ಕುವೆಂಪು ಕಾವ್ಯ ಕುರಿತ ಮೊದಲ ವಿಚಾರ ಗೋಷ್ಠಿ ಆರಂಭ. ಕುವೆಂಪು ಕಾವ್ಯದ ಕುರಿತು ಅವರು ಮಾತನಾಡುವವರು. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಡಾ. ಟಿ.ಎಸ್. ಸತ್ಯನಾಥ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಕುರಿತು, ಮೈಸೂರು, ಪ್ರಾಂಶುಪಾಲರಾದ ಡಾ. ಶಿವರಾಮ ಕಾಡನಕುಪ್ಪೆ ವಿಚಾರ ಮಂಡಿಸುವವರಿದ್ದಾರೆ.
ಅಪರಾಹ್ನ 2.30ಕ್ಕೆ ಕುವೆಂಪು ಕಾದಂಬರಿ ಕುರಿತ ಎರಡನೇ ಗೋಷ್ಠಿ ಹಿರಿಯ ಲೇಖಕ ಪ್ರೊ. ಪ್ರಭುಶಂಕರ್ ಅವರ ಅಧ್ಯಕ್ಷತೆಯಲ್ಲಿ. ಕಾನೂರು ಹೆಗ್ಗಡತಿ ಕುರಿತು ವಿಚಾರ ಮಂಡಿಸುವವರು, ಸಾರ್ವಜನಿಕ ಸಂಪರ್ಕಾಧಿಕಾರಿ, ಬಿ.ಡಿ.ಎ, ಬೆಂಗಳೂರಿನ ಡಾ.ಕೆ. ಪುಟ್ಟಸ್ವಾಮಿ ಅವರು ಹಾಗೂ ಮಲೆಗಳಲ್ಲಿ ಮದುಮಗಳು ಕುರಿತು ವಿಚಾರ ಮಂಡನೆ, ಹಾನಗಲ್ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ ನಂಗಲಿ ಅವರಿಂದ. ಸಾಯಂಕಾಲ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗುರು ಉದಯ್ ಕುಮಾರ ಶೆಟ್ಟಿ ಮತ್ತು ತಂಡದವರಿಂದ.
ದಿನಾಂಕ 17 ಭಾನುವಾರ : ಬೆಳಗಿನ 10.30ಕ್ಕೆ ಜವಾಹರಲಾಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಪ್ರಸಿದ್ಧ ಕವಿ, ನಾಟಕಕಾರರಾದ ಪ್ರೊ. ಎಚ್.ಎಸ್. ಶಿವಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕುವೆಂಪು ನಾಟಕಗಳ ಕುರಿತು ವಿಚಾರಗೋಷ್ಠಿಯ ಚಾಲನೆ. ಕುವೆಂಪು ನಾಟಕಗಳ ವಸ್ತು ಮತ್ತು ತಂತ್ರ ಕುರಿತು ಮಾತನಾಡುವವರು ರಂಗಾಯಣದ ನಿರ್ದೇಶಕರಾದ ಪ್ರೊ. ಲಿಂಗದೇವರು ಹಳೇಮನೆ ಹಾಗೂ ಕುವೆಂಪು ನಾಟಕಗಳ ವೈಚಾರಿಕತೆ ಕುರಿತು ಸರ್ಕಾರಿ ವಿಜ್ಞಾನ ಕಾಲೇಜು, ಬೆಂಗಳೂರು, ಪ್ರಾಧ್ಯಾಪಕರಾದ ಡಾ. ಕೆ.ವೈ. ನಾರಾಯಣಸ್ವಾಮಿ ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ.
ಮಧ್ಯಾಹ್ನ 2.30ಕ್ಕೆ ಹಿರಿಯ ಲೇಖಕರೊಡನೆ ಒಂದು ಸಂವಾದ. ಭಾಗವಹಿಸುವ ಲೇಖಕರು : ಡಾ. ಯು.ಆರ್. ಅನಂತಮೂರ್ತಿ, ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಪ್ರಭುಶಂಕರ್, ಡಾ. ಎ. ಮುರಿಗೆಪ್ಪ, ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ಪ್ರಧಾನ ಗುರುದತ್, ಪ್ರೊ. ಎಚ್.ಎಸ್. ಶಿವಪ್ರಕಾಶ್, ಅಗ್ರಹಾರ ಕೃಷ್ಣಮೂರ್ತಿ, ಡಾ. ಪುರುಷೋತ್ತಮ ಬಿಳಿಮಲೆ, ಪ್ರೊ. ಲಿಂಗದೇವರು ಹಳೇಮನೆ ಹಾಗೂ ಡಾ. ಕರೀಗೌಡ ಬೀಚನಹಳ್ಳಿ.
ಸಾಯಂಕಾಲ 4.30ಕ್ಕೆ ಸಮಾರೋಪ ಸಮಾರಂಭ. ಸಮಾರೋಪ ಭಾಷಣ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ Selected poems of Kuvempu ಎಂಬ ಪುಸ್ತಕ ಬಿಡುಗಡೆ ದೆಹಲಿಯ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿ ಅವರಿಂದ. ಕೃತಿಯ ಬಗ್ಗೆ ಕುವೆಂಪು ಭಾಷಾಭಾರತಿಯ ಅಧ್ಯಕ್ಷ ಪ್ರೊ. ಪ್ರಧಾನ ಗುರುದತ್ ಅವರು ಮಾತನಾಡುತ್ತಾರೆ. ಮುಖ್ಯ ಅತಿಥಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎಚ್. ಕೃಷ್ಣಯ್ಯ ಮತ್ತು ಸಮಾರೋಪದ ಅಧ್ಯಕ್ಷತೆಯನ್ನು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಹಂಪ ನಾಗರಾಜಯ್ಯ ವಹಿಸುವರು.
5.30ಕ್ಕೆ ಶ್ರೀರಾಮಾಯಣ ದರ್ಶನಂ ಗಮಕ ಮತ್ತು ವ್ಯಾಖ್ಯಾನ ಜಲಜಾರಾಜು ಹಾಗೂ ಡಾ. ಪುರುಷೋತ್ತಮ ಬಿಳಿಮಲೆ ಅವರಿಂದ. ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿದೆ. ಖ್ಯಾತ ಗಾಯಕಿ ರತ್ನಮಾಲ ಪ್ರಕಾಶ್ ಅವರು ಈ ಮೂರು ದಿನಗಳ ಕಾಲ ನಮ್ಮೊಂದಿದ್ದು ಸಂಗೀತ ಶಿಬಿರ ನಡೆಸಿ ಸ್ಥಳೀಯ ಕಲಾವಿದರಿಗೆ ತರಬೇತಿ ನೀಡಿ ಕುವೆಂಪು ಭಾವಗೀತೆಗಳ ಗಾನ ಲಹರಿಯನ್ನು ನಡೆಸಿಕೊಡಲಿದ್ದಾರೆ. (ಕುವೆಂಪು ಚಿತ್ರಕೃಪೆ : ಕೆಜಿ ಸೋಮಶೇಖರ್, ಪುಣೆ)