ರಾಮನ ಪಕ್ಷದಲ್ಲಿ ಪುರುಷೋತ್ತಮರ ಆಯ್ಕೆಗೆ ಅಗ್ನಿಪರೀಕ್ಷೆ
ಸಾಮಾನ್ಯವಾಗಿ ರಾಜಕಾರಿಣಿಗಳಿಗೂ ವಿದ್ಯೆಗೂ ದೂರದ ಸಂಬಂಧ. ಅಂತಹುದರಲ್ಲಿ ಪಕ್ಷದಲ್ಲಿ ಶಿಕ್ಷಿತ ನಾಯಕರು ಇರಲಿ ಎಂದು ಬಿಜೆಪಿ ಎಣಿಸಿದೆ. ಪಕ್ಷದಲ್ಲಿ 'ಪದವಿ' ಗಳಿಸಬೇಕೆಂದರೆ ಪ್ರವೇಶ, ಪ್ರಗತ್ ಮತ್ತು ಪ್ರವೀಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಅನಿವಾರ್ಯವಾಗಿದೆ. ನಿತಿನ್ ಗಡ್ಕರಿ ಅವರು ಪಕ್ಷದ ಚುಕ್ಕಾಣಿ ಹಿಡಿದ ಮೇಲೆ ಪಕ್ಷದ ಕಾರ್ಯಕರ್ತರಿಗೆ ಇಂತಹ ಅಗ್ನಿಪರೀಕ್ಷೆಯೊಡ್ಡಿದ್ದಾರೆ.
ಮೊದಲ ಹಂತದಲ್ಲಿ ಏಪ್ರಿಲ್ 23 ಮತ್ತು 24ರಂದು ಮಧ್ಯಪ್ರದೇಶದಲ್ಲಿನ ಪಕ್ಷದ ನಾಯಕರಿಗೆ ಭೋಪಾಲ್ ನಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ಬಳಿಕ, ಏಪ್ರಿಲ್ 25ರಂದು ಪ್ರವೇಶ ಪರೀಕ್ಷೆ ನಿಕ್ಕಿಯಾಗಿದೆ. ಅಭ್ಯರ್ಥಿಗಳ ಅರ್ಥಾತ್ ಪಕ್ಷದ ನಾಯಕರು ಹೊಂದಿರುವ ಸಾಮಾನ್ಯ ಜ್ಞಾನ ಮಟ್ಟ ಅರಿಯಲು ಆಬ್ಜೆಕ್ಟೀವ್ ಟೈಪ್ ಪರೀಕ್ಷೆ ನಡೆಯಲಿದೆ. ಪಕ್ಷದ ಧ್ಯೇಯೋದ್ದೇಶಗಳು, ರಾಷ್ಟ್ರೀಯ ಸ್ತರದ ರಾಜಕೀಯ ಆಗುಹೋಗುಗಳು ಪರೀಕ್ಷೆ ವಿಷಯಗಳಾಗಿರುತ್ತವೆ.
ಇಲ್ಲಿ ತೇರ್ಗಡೆಯಾದ ಬಳಿಕ ಮುಂದಿನ 'ಪ್ರಗತಿ' ಪರೀಕ್ಷೆ. ಆ ನಂತರವಷ್ಟೇ 'ಪ್ರವೀಣ' ನಾಯಕರ ಆಯ್ಕೆ. ಅನುತ್ತೀರ್ಣರು ಪಕ್ಷದ ಬಾಗಿಲು ಬಡಿಯಲು ಮುಂದಿನ ವರ್ಷದ ವರೆಗೂ ಕಾಯಬೇಕು. ಅಗ್ನಿ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಬಳಿಕ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಮಾನದಂಡವಾಗಿರಿಸಿಕೊಂಡು ತಕ್ಕ ಜವಾಬ್ದಾರಿಯನ್ನು ಹೊರೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.