ಕರಡು ಸಮಿತಿಗೆ ಇದು 'ಭೂಷಣ' ಪ್ರಾಯವೇ ?
ಹಾಗೆ ನೋಡಿದರೆ ಸಮಿತಿಯಲ್ಲಿ ಈಗಾಗಲೇ ಎಂಟು ಮಂದಿ ನ್ಯಾಯಾಂಗ ಹಿನ್ನೆಲೆಯಿಂದ ಬಂದ ಪಂಡಿತರೇ ಇದ್ದಾರೆ. ಅಂತಹುದರಲ್ಲಿ ಮತ್ತೆ ಈ ಖ್ಯಾತ ನ್ಯಾಯವಾದಿಗಳನ್ನು ನೇಮಕ ಮಾಡುವ ಜರೂರತ್ತು ಏನಿತ್ತು? ಎಂಬ ಪ್ರಶ್ನೆ ಉದ್ಭವವಾಗಿದೆ. ಇವರಿಬ್ಬರ ನೇಮಕದ ವಿರುದ್ಧ ಯೋಗ ಗುರು ಬಾಬಾ ರಾಮದೇವ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಗರಿಕರ ಪರ 5 ಮಂದಿಯನ್ನು ಸಮಿತಿಗೆ ನೇಮಕ ಮಾಡುವಾಗ ಸ್ವಜನ ಪಕ್ಷಪಾತಕ್ಕೆ ಅವಕಾಶ ಕೊಟ್ಟಿದ್ದು ಏಕೆ? ಎಂದು ಪ್ರಶ್ನಿಸಲಾಗಿದೆ.
ಆದರೆ ಹಿರಿಯಣ್ಣ ಹಜಾರೆ ಈ ಬಗ್ಗೆ ತಲೆಕೆಡಿಕೊಂಡಿಲ್ಲ. ಒಂದೇ ಕುಟುಂಬದ ಇಬ್ಬರನ್ನು ನೇಮಿಸಿದ್ದರ ಹಿಂದೆ ಯಾವುದೇ ತಪ್ಪಿಲ್ಲ. ನಮಗೆ ಅನುಭವ ಮತ್ತು ಅನುಭವಿಗಳು ಅಗತ್ಯವಿತ್ತು ಎಂದಿದ್ದಾರೆ. ಈ ಮಧ್ಯೆ, ಸಮಿತಿಯಲ್ಲಿಬೇಕು ಎಂದು ನಾನು ಬಯಸಿರಲಿಲ್ಲ. ಆದರೂ ಸಮಿತಿ ಸೇರಿದ್ದೇನೆ. ಸಂದರ್ಭ ಬಂದರೆ ಸಮಿತಿಯಿಂದ ಹಿಂದೆ ಸರಿಯುತ್ತೇನೆ ಎಂದು ಶಾಂತಿ ಭೂಷಣ್ ಹೇಳಿದ್ದಾರೆ.
ಕಾನೂನು ಪಂಡಿತ ಶಾಂತಿ ಭೂಷಣ್ ಅವರು ಪ್ರಧಾನಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಅವರ ಪುತ್ರ ಸಹ ಕಾನೂನು ತಜ್ಞರಾಗಿದ್ದಾರೆ. ಆದಾಗ್ಯೂ ಅಪ್ಪ-ಮಗನನ್ನೇ ಸಮಿತಿಗೆ ಆಯ್ಕೆಮಾಡುವ ಅಗತ್ಯವೇನಿತ್ತು? ಇವರಲ್ಲಿ ಒಬ್ಬರನ್ನು (ಶಾಂತಿ ಭೂಷಣ್) ಸಮಿತಿಯಲ್ಲಿ ಉಳಿಸಿಕೊಂಡು ಮತ್ತೊಬ್ಬರ ಸ್ಥಾನಕ್ಕೆ ಬೇರೆ ಕಾನೂನು ಪಂಡಿತರನ್ನೋ ಅಥವಾ ಬೇರೆಯದೇ ಕ್ಷೇತ್ರದ ಯುವ ನೇತಾರರನ್ನೋ ನೇಮಿಸಿಕೊಳ್ಳಬಹುದಲ್ಲವೇ. ಇನ್ನೂ ಕಾಲ ಮಿಂಚಿಲ್ಲ. ಹಿರಿಯಣ್ಣಾ ಈ ಬಗ್ಗೆ ಪ್ರಶಾಂತವಾಗಿ ಯೋಚಿಸಿ, ನಿಷ್ಕಳಂಕ ಜನ ಲೋಕಪಾಲ ಕಾನೂನು ರಚನೆಗೆ ಅನುವು ಮಾಡಿಕೊಡುವರೇ?