ಗಾಂಧೀಜಿ ಕೂಡಾ ಭ್ರಷ್ಟರಾಗುತ್ತಿದ್ದರು: ಎಚ್ಡಿಕೆ
ಆದರೆ, ನಾಲಗೆ ಕಚ್ಚಿಕೊಂಡ ಕುಮಾರಸ್ವಾಮಿ, ಹಾವೇರಿಗೆ ಬರುವಷ್ಟರಲ್ಲಿ ಪ್ಲೇಟ್ ಉಲ್ಟಾ ಮಾಡಿ, ನಾನು ಗಾಂಧೀಜಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿಲ್ಲ. ಗಾಂಧಿ ಈಗ ಇದ್ದಿದ್ದರೆ ಅವರಿಗೂ ರಾಜಕೀಯ ವ್ಯವಸ್ಥೆ ಉಸಿರುಗಟ್ಟಿಸುತ್ತಿತ್ತು, ಭ್ರಷ್ಟತನವಿಲ್ಲದಿದ್ದರೆ ಉಳಿಗಾಲವಿಲ್ಲ. ಸ್ವಂತ ಹಣದಿಂದ ಚುನಾವಣೆ ನಡೆಸುವುದು ಅಸಾಧ್ಯದ ಮಾತು ಎಂದಿದ್ದೆ ಅಷ್ಟೇ. ಮಾಧ್ಯಮಗಳು ನನ್ನ ಮಾತನ್ನು ತಿರುಚಿ ಪ್ರಸಾರ ಮಾಡಿದ್ದಾರೆ ಎಂದು ಖಾಸಗಿ ವಾಹಿನಿಗಳನ್ನು ದೂರಿದರು.
ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಜಾರಿಗೆ ತರಲು ಉದ್ದೇಶಿ ಸಿರುವ ಜನಲೋಕಪಾಲ್ ಮಸೂದೆ ರಚಿಸುವ ಮುನ್ನ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆ ಪಡೆಯುವಂತೆ ಯಡಿಯೂರಪ್ಪ ನೀಡಿರುವ ಹೇಳಿಕೆಯನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಕುರಿತು ಸಲಹೆಗಳನ್ನು ನೀಡಲು ಯಡಿಯೂರಪ್ಪ ಅರ್ಹ ವ್ಯಕ್ತಿಯಾಗಿದ್ದು, ಅವರನ್ನು ಜನಲೋಕಪಾಲ್ ಸಮಿತಿಗೆ ಸದಸ್ಯರನ್ನಾಗಿಸಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ದಾಖಲೆಗಳನ್ನು ಬಹಿರಂಗಪಡಿಸುವೆ: ಕೃಷಿ, ಸಾವಯವ ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ನಡೆದಿರುವ ಹಗರಣಗಳ ದಾಖಲೆಗಳು ಲಭ್ಯವಾಗಿದೆ. ಶೀಘ್ರದಲ್ಲೆ ಅದನ್ನು ಬಯಲು ಮಾಡಲಾಗುವುದು. ರೈತ ಸಂಪರ್ಕ ಕೇಂದ್ರಗಳಿಗೆ ಸರಕಾರ ಹಣ ಬಿಡುಗಡೆ ಮಾಡಿದ್ದರೂ, ಕಾಮಗಾರಿಗಳು ಇನ್ನೂ ಕೈಗೆತ್ತಿಕೊಳ್ಳಲಾಗಿಲ್ಲ. ಸಾವಯವ ಕೃಷಿಗೆ ಸರ್ಕಾರ ಬಿಡುಗಡೆ ಮಾಡಿರುವ 100 ಕೋಟಿ ರು.ಗಳಲ್ಲಿ ಒಂದು ರೂಪಾಯಿ ಕೂಡಾ ಅರ್ಹರಿಗೆ ಸಿಕ್ಕಿಲ್ಲ ಈ ಬಗ್ಗೆ ಸಿಬಿಐ ತನಿಖೆ ನಡೆದರೆ ಸತ್ಯ ಹೊರಬೀಳುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.