ಭ್ರಷ್ಟಾಚಾರ ಸಂಹಾರಕ್ಕೆ ಯಡಿಯೂರಪ್ಪ ಅಖಂಡ ಬೆಂಬಲ

ಯಡಿಯೂರಪ್ಪನವರ ಈ ಮಾತುಗಳಿಗೆ ನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜು ಅರಸು ಅವರು ಪರೋಕ್ಷವಾಗಿ ಸಾಕ್ಷಿಯಾಗಿದ್ದರೆ ನಾಡಿನ ಮತ್ತೊಬ್ಬ ದಿಗ್ಗಜ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಖುದ್ದು ಸಾಕ್ಷಿಯಾಗಿದ್ದಾರೆ. ಸಂದರ್ಭ: ಗ್ರಾಮೀಣಾಭಿವೃದ್ಧಿ ಮತ್ತು ಹಿಂದುಳಿದ ವರ್ಗದ ಅಭಿವೃದ್ಧಿಗೆ ಶ್ರಮಿಸಿದವರಿಗೆ ಸರಕಾರದ ಕೊಡಮಾಡುವ ದೇವರಾಜ ಅರಸ್ ಪ್ರಶಸ್ತಿಯನ್ನು ವೀರೇಂದ್ರ ಹೆಗಡೆ ಅವರಿಗೆ ಪ್ರದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಾಗ. ಇದೇ ಸಂದರ್ಭದಲ್ಲಿ ವೀರೇಂದ್ರ ಹೆಗಡೆ ಅವರೂ ಸಹ ಅಣ್ಣಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭೂ ಡಿನೋಟಿಫಿಕೇಶನ್ ವಿಚಾರದಲ್ಲಿ ಮಿತಿಮೀರಿದ ಸ್ವಜನ ಪಕ್ಷಪಾತ ಮಾಡಿರುವ ಆರೋಪ ಹೊತ್ತಿರುವ ಸನ್ಮಾನ್ಯ ಯಡಿಯೂರಪ್ಪ ಅವರು ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೆ ತರಲು ತಕ್ಷಣ ಕ್ರಮಕೈಗೊಳ್ಳುವಂತೆ ಕೇಂದ್ರ ಸರಕಾರನ್ನು ಆಗ್ರಹಿಸಿದ್ದಾರೆ. ಸ್ವತಃ ರಾಜ್ಯಪಾಲರ ಅನುಮತಿಯನ್ನು ಪಡೆದುಕೊಂಡೇ ರಾಜ್ಯದ ಇಬ್ಬರು ವಕೀಲರು ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಡಿ ಒಟ್ಟು ಐದು ದೂರುಗಳನ್ನು ದಾಖಲಿಸಿದ್ದಾರೆ.
ಲೋಕಾಯುಕ್ತ ನ್ಯಾಯಾಲಯ ಈ ಬಗ್ಗೆ ತನಿಖೆ ನಡೆಸಿ ಮೇ ನಾಲ್ಕರ ಒಳಗಾಗಿ ವರದಿ ಒಪ್ಪಿಸುವಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿ ರೂಪ್ ಕುಮಾರ್ ದತ್ತಾ ಅವರಿಗೆ ಆದೇಶಿಸಿದೆ. ಆದರೆ ರಾಜ್ಯ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿದೆ. ಇನ್ನು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಎಂದು ಬಿಜೆಪಿ ಪಕ್ಷದಲ್ಲಿ ಭಿನ್ನಮತೀಯರು, ಸಂಪುಟದ ಕೆಲವು ಸದಸ್ಯರು ನಿರಂತರವಾಗಿ ಆಗ್ರಹಿಸುತ್ತಾ ಬಂದಿದ್ದಾರೆ.












Click it and Unblock the Notifications