ಸಾಯಿಬಾಬಾ ಚಿಂತಾಜನಕ: ಪುಟ್ಟಪರ್ತಿ ಉದ್ವಿಗ್ನ
ಎರಡು ದಿನಗಳಿಂದ ಭಗವಾನ್ ಸಾಯಿಬಾಬಾ ಆರೋಗ್ಯ ತೀವ್ರ ಏರುಪೇರು ಕಂಡಿರುವುದರಿಂದ ಸಾವಿರಾರು ಭಕ್ತಾದಿಗಳು ಶ್ರೀ ಸತ್ಯಸಾಯಿ ಬಾಬಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯತ್ತ ಧಾವಂತದಿಂದ ಧಾವಿಸುತ್ತಿದ್ದಾರೆ. ಬಾಬಾ ಅವರನ್ನು ಪ್ರತ್ಯಕ್ಷವಾಗಿ ಕಾಣಬೇಕು ಎಂದು ಭಕ್ತರು ಪಟ್ಟು ಹಿಡಿದಿದ್ದರು. ಅನಂತಪುರ ಜಿಲ್ಲಾಧಿಕಾರಿ ಕಾರರನ್ನು ಜಂಖಗೊಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸೋಮವಾರ ಬೆಳಗ್ಗೆ ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಆಸ್ಪತ್ರೆಯ ಸುತ್ತು ಭಾರಿ ಬಂದೋಬಸ್ತ್ ಮಾಡಲಾಗಿದ್ದು, ಅರೆ ಸೇನೆ ಮತ್ತು ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರಶಾತಿ ನಿಲಯದ ಸುತ್ತಲೂ ಭದ್ರಕೋಟೆ ನಿರ್ಮಿಸಲಾಗಿದೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಆಂಧ್ರ ಡಿಜಿಪಿ ಅರವಿಂದ ರಾವ್ ಹೇಳಿದ್ದಾರೆ. ಅನಂತಪುರ ಡಿಐಜಿ ಚಾರು ಸಿನ್ಹಾ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಕ್ರಿಕೆಟ್ ದೇವರು ಎಂದೇ ಪರಿಗಣಿತರಾಗಿರುವ ಸಚಿನ್ ತೆಂಡೂಲ್ಕರ್ ಸೇರಿದಂತೆ ಪ್ರಧಾನಿಗಳು, ರಾಷ್ಟ್ಪತಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರು. ಗಣ್ಯಾತಿಗಣ್ಯ ವ್ಯಕ್ತಿಗಳು ಭಗವಾನ್ ಬಾಬಾ ಅವರ ಪರಮ ಭಕ್ತರು. ಮಾರ್ಚ್ 28ರಂದು ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದಂತೆ ಸಾಯಿಬಾಬಾ ಅವರನ್ನು ಪ್ರಶಾಂತಿ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಲಾಯಿತು.
ಈ ಮಧ್ಯೆ, ಆಂಧ್ರ ಪ್ರದೇಶ ಸರಕಾರವುಧಾರ್ಮಿಕ ಗುರು ಬಾಬಾ ಅವರ ಆರೋಗ್ಯದ ಬಗ್ಗೆ ಅನುಕ್ಷಣದ ನಿಗಾ ಇಟ್ಟಿದ್ದು, ಮುಖ್ಯಮಂತ್ರಿ ಕಿರಣ್ ರೆಡ್ಡಿ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಸಾಯಿಬಾಬಾ ಅವರ ಪರಮ ಭಕ್ತರಾದ ಸಚಿವೆ ಜೆ. ಗೀತಾ ರೆಡ್ಡಿ ಆಸ್ಪತ್ರೆಯಲ್ಲೇ ಇದ್ದು, ಬಾಬಾ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದಾರೆ. ಬಾಬಾ ಈ ಹಿಂದೆಯೂ ಕೆಲವು ಬಾರಿ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ. ಈ ಬಾರಿಯೂ ಮತ್ತೆ ಚೇತರಿಸಿಕೊಳ್ಳಲಿದ್ದಾರೆ ಎಂದು ಗೀತಾ ಹೇಳಿದ್ದಾರೆ. ಆಂಧ್ರ ರಾಜ್ಯಪಾಲ ಇಎಸ್ ಎಲ್ ನರಸಿಂಹನ್ ಅವರು ಭಗವಾನ್ ಬಾಬಾ ಬಗ್ಗೆ ಸಕಲ ಜಾಗ್ರತೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ. AIIMSನ ಮಾಜಿ ಹೃದ್ರೋಗ ತಜ್ಞ ಹಾಗೂ ಶ್ರೀ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಎ. ಎನ್. ಸಫಾಯ ಬಾಬಾ ಆರೋಗ್ಯವನ್ನು ಖುದ್ದು ಪರೀಕ್ಷಿಸುತ್ತಿದ್ದಾರೆ.