ಮೊಹಾಲಿ ಸ್ಟೇಡಿಯಂ ಭದ್ರತೆಗೆ ಸೇನೆ ನಿಯೋಜನೆ
ಮೊಹಾಲಿ, ಮಾ. 29: ಭಾರತ-ಪಾಕ್ ದಾಯಾದಿಗಳ ಮಧ್ಯೆ ನಾಳೆ (ಮಾರ್ಚ್ 30) ಜರುಗುವ ಮಹಾಕದನಕ್ಕಾಗಿ ಭದ್ರತೆಯ ದೃಷ್ಟಿಯಿಂದ ರಕ್ಷಣಾ ಪಡೆಗಳು ಇಲ್ಲಿನ ಕ್ರಿಕೆಟ್ ಸ್ಟೇಡಿಯಂಅನ್ನು ಭದ್ರ ಕೋಟೆಯಾಗಿಸಿವೆ. ಮಾಮೂಲಿ ಪಂದ್ಯಗಳಿಗಾದರೆ ಸ್ಥಳೀಯ ಪೊಲೀಸರ ಸರ್ಪಗಾವಲು ಹಾಕಲಾಗುತ್ತದೆ. ಆದರೆ ಉಭಯ ರಾಷ್ಟ್ರಗಳ ಪ್ರಧಾನ ಮಂತ್ರಿಗಳೇ ಸ್ಟೇಡಿಯಂನಲ್ಲಿ ಉಪಸ್ಥಿತರಿರುವುದರಿಂದ ವಾಯುಪಡೆ ಮತ್ತು ಭೂಸೇನೆಯೂ ಭದ್ರತೆಗೆ ನಿಯೋಜನೆಗೊಂಡಿದೆ.
ಆಂಟಿ ಏರ್ ಕ್ರಾಫ್ಟ್ ಮಿಸೈಲ್, ಗನ್, ರೊಬೊ ಚಾಲಿತ ಬಾಂಬ್ ನಿಷ್ಕ್ರಿಯ ದಳಗಳು ಈಗಾಗಲೇ ಸ್ಟೇಡಿಯಂ ಅನ್ನು ಸುತ್ತುವರಿದಿವೆ. ಇಡೀ ದಿನ ವಾಯು ಸರ್ವೇಕ್ಷಣೆ ನಿರಂತವಾಗಿ ನಡೆಯಲಿದೆ. ಸಂಭವನೀಯ ವಾಯು ದಾಳಿಯನ್ನು ಭೇದಿಸಲು ಭೂಸೇನೆಯ ಪಶ್ಚಿಮ ಕಮಾಂಡ್ ಘಟಕ ಮಿಸೈಲ್ ಗಳೊಂದಿಗೆ ಸಜ್ಜಾಗಿದೆ. ಬ್ರಿಟನ್ ನಿರ್ಮಿತ ರಿಮೋಟ್ ತಂತ್ರಜ್ಞಾನದ ಬಾಂಬ್ ದಳ ಮೈದಾನದ ಸುತ್ತ ಠಳಾಯಿಸುತ್ತಿದೆ. ಸಮೀಪದಲ್ಲೇ ಇರುವ ಚಂಡಿ ಮಂದಿರದಲ್ಲಿ ಪಶ್ಚಿಮ ಕಮಾಂಡ್ ತುಡಕಡಿಗಳು ಠಿಕಾಣಿ ಹೂಡಿದ್ದು ಯಾವುದೇ ದಾಳಿಯನ್ನು ಹಿಮ್ಮೆಟ್ಟಿಸಲು ಸನ್ನದ್ಧವಾಗಿದೆ.
ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಮೊಹಾಲಿಗೆ ವಿಮಾನದಲ್ಲಿ ನೇರವಾಗಿ ಹಾರಿಬರಲಿದ್ದಾರೆ. ಮುಂಬಯಿ ದಾಳಿ ಬಳಿಕ ಉಭಯ ನಾಯಕರು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಇದೊಂದು ಅನೌಪಚಾರಿಕ ಭೇಟಿ ಮಾತ್ರ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ. ಗಿಲಾನಿ ಜತೆ 50 ಸದಸ್ಯರ ತಂಡದೊಂದಿಗೆ ಆಗಮಿಸಲಿದ್ದಾರೆ. ಗಮನಾರ್ಹವೆಂದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಂಗ್ ಗೆ ಸಾಥ್ ನೀಡಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಭಾರತದ ನಿಯೋಗದಲ್ಲಿದ್ದಾರೆ.












Click it and Unblock the Notifications