ಹೋಳಿ ಆಡಿ ಬಂದವರ ಬಾಳೇ ಮುಗಿದಿತ್ತು
ರಾಜಸ್ತಾನದವರಾದ ಅಮರ್ಸಿಂಗ್(35), ಸೀತಾರಾಮ್(33) ಮೃತಪಟ್ಟವರಾಗಿದ್ದು, ರೋಹಿತ್, ಪ್ರಕಾಶ್, ರಾಮಕಿಶೋರ್, ಶಂಕರ್, ಸುಂದರ್ ಮತ್ತು ಸವರ್ ಎಂಬುವರು ತೀವ್ರ ಗಾಯಗೊಂಡವರಾಗಿದ್ದು, ಮುಖೇಶ್ ಹಾಗೂ ವಿಕ್ರಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇವರೆಲ್ಲರೂ ಕುಶಾಲನಗರದ ವಿ.ಎಂ.ಮಾರ್ಬಲ್ನಲ್ಲಿ ಕೆಲಸ ಮಾಡುತ್ತಿದ್ದು, ಹೋಳಿ ಹಬ್ಬವನ್ನು ಆಚರಿಸುವ ಸಲುವಾಗಿ ದುಬಾರೆಗೆ ತೆರಳಿದ್ದರು. ಅಲ್ಲಿ ಮೋಜು ಮಸ್ತಿ ನಡೆಸಿ ಅದೇ ಜೋಸ್ನಲ್ಲಿ ಕುಶಾಲನಗರದತ್ತ ತೆರಳುತ್ತಿದ್ದರು. ಆದರೆ ಕುಶಾಲನಗರಕ್ಕೆ ಅನತಿ ದೂರದಲ್ಲಿರುವ ಮಾದಾಪಟ್ಟಣದ ಎಸ್ಎಲ್ಎನ್ ಟಿಂಬರ್ ಮಿಲ್ ಬಳಿ ಚಾಲಕ ಅಮರ್ಸಿಂಗ್ನ ನಿಯಂತ್ರಣ ತಪ್ಪಿದ ವ್ಯಾನ್ ಹೊಲದ ಹಳ್ಳಕ್ಕೆ ಮಗುಚಿ ಅಲ್ಲೇ ಇದ್ದ ಮರಕ್ಕೆ ಅಪ್ಪಳಿಸಿದೆ. ಇದರಿಂದ ವ್ಯಾನ್ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಅಮರ್ ಸಿಂಗ್ ಹಾಗೂ ಸೀತಾರಾಮ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಕುಶಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.