ದಾವೂದ್ ಆಸ್ತಿ: ಕೊನೆಗೂ ಹಕ್ಕು ಸ್ಥಾಪನೆ

ಈ ಬೇನಾಮಿ ಆಸ್ತಿ ವಾಣಿಜ್ಯ ಸಂಕೀರ್ಣವಾಗಿದ್ದು, ಪಾತಕಿ ದಾವೂದ್ 1980ರ ದಶಕದಲ್ಲಿ ತನ್ನ ಭೂಗತ ಚಟುವಟಿಕೆಗಳನ್ನು ಇಲ್ಲಿಂದಲೇ ನಡೆಸುತ್ತಿದ್ದ. ಪ್ರಸ್ತುತ ಈ ಆಸ್ತಿ ದಾವೂದ್-ನ ಸೋದರಿ ಹಸೀನಾ ಪಾರ್ಕರ್ ಹಿಡಿತದಲ್ಲಿದ್ದು, ಇನ್ನು ಮೂರು ತಿಂಗಳಲ್ಲಿ ಅದನ್ನು ಶ್ರೀವಾಸ್ತವ ಅವರಿಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಕಳೆದ ವಾರ ಸೂಚಿಸಿದೆ. ಒಂದು ವೇಳೆ ಹಸೀನಾ ಆಸ್ತಿಯನ್ನು ಪರಭಾರೆ ಮಾಡಲು ಒಪ್ಪದಿದ್ದಲ್ಲಿ ಶ್ರೀವಾಸ್ತವ ಅವರು ಪೊಲೀಸರ ನೆರವಿನೊಂದಿಗೆ ಬಲವಂತದಿಂದ ಅದನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದೂ ನ್ಯಾಯಾಲಯ ಹೇಳಿದೆ. ಶ್ರೀವಾಸ್ತವ ಕಾನೂನು ಪ್ರಕ್ರಿಯೆಗಾಗಿ ಖರ್ಚು ಮಾಡಿರುವ ಹಣವನ್ನೂ ಪಾವತಿಸುವಂತೆ ಹಸೀನಾಗೆ ತಿಳಿಸಲಾಗಿದೆ.
1996ರಲ್ಲಿ ದಾವೂದ್-ನಿಂದ ಇಲಾಖೆಗೆ 40.31 ಕೋಟಿ ರು. ತೆರಿಗೆ ಬರಬೇಕಿತ್ತು. ಇಲಾಖೆ ನೀಡುತ್ತಿದ್ದ ಯಾವುದೇ ನೋಟಿಸ್-ಗೆ ಪಾತಕಿ ಕ್ಯಾರೆ ಎನ್ನುತ್ತಿರಲಿಲ್ಲ. ಆಗ ಇಲಾಖೆ ಅನಿವಾರ್ಯವಾಗಿ 11 ಕಡೆಗಳಲ್ಲಿ ದಾವೂದ್-ಗೆ ಸೇರಿದ ಆಸ್ತಿಯನ್ನು ಜಫ್ತಿ ಮಾಡಿತು. 2011ರಲ್ಲಿ ಆ ಆಸ್ತಿಗಳನ್ನೆಲ್ಲ ಒಂದೊಂದಾಗಿ ಹರಾಜಿಗಿಟ್ಟಿತು. ನಾಗಪಾಡದಲ್ಲಿರುವ ವಾಣಿಜ್ಯ ಸಂಕೀರ್ಣವನ್ನು ಶ್ರೀವಾಸ್ತವ ಧೈರ್ಯವಾಗಿ ಖರೀದಿಸಿದ್ದರು. ಆದರೆ ದಾವೂದ್-ನ ಆಣತಿಯಂತೆ ಛೋಟಾ ಶಕೀಲ್ ನಿರಂತವಾಗಿ ಶ್ರೀವಾಸ್ತವಗೆ ಬೆದರಿಕೆಯೊಡ್ಡಿದ್ದ.
ಶ್ರೀವಾಸ್ತವ 2.5 ಲಕ್ಷ ಖಾತರಿ ಹಣ ನೀಡಿ ನಾಗಪಾಡ ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ನಿರ್ಧರಿಸಿದರು. ಇಲಾಖೆಯೂ ಇದಕ್ಕೆ ಅಂಕಿತ ಹಾಕಿತು. ಅದಕ್ಕೂ ಮುನ್ನ, ಒಂದು ಹಂತದಲ್ಲಿ ಶ್ರೀವಾಸ್ತವ ಅವರು ದಾವೂದ್ ಮನುಷ್ಯ ಎಂದು ಇಲಾಖೆಯೂ ಸಂದೇಹ ವ್ಯಕ್ತಪಡಿಸಿತ್ತು. ಆದರೆ ಹಸೀನಾ ವಾಣಿಜ್ಯ ಸಂಕೀರ್ಣದ ಮೇಲೆ ಹಕ್ಕು ಸ್ಥಾಪಿಸಲು ಮುಂದಾಗಿದ್ದಳು. ದಾವೂದ್-ಗೂ ಈ ಆಸ್ತಿಗೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ತನಗೆ ಆಸ್ತಿ ಎಂದು ನ್ಯಾಯಾಲಯದಲ್ಲಿ 2004ರಲ್ಲಿ ದಾವೆ ಹೂಡಿದ್ದಳು. ಆಗ ಶ್ರೀವಾಸ್ತವ ದಾವೂದ್ ಕಡೆಯ ಮನುಷ್ಯ ಅಲ್ಲ ಎಂಬುದು ಖಾತ್ರಿಯಾಯಿತು. ಇದೀಗ ಶ್ರೀವಾಸ್ತವ ಅವರಿಗೆ ಆಸ್ತಿ ಪರಭಾರೆಯಾಗಲಿದೆ ಎಂದು ಇಲಾಖೆ ಹೇಳಿದೆ.












Click it and Unblock the Notifications