ಹಿಂದೂ ಮುಸ್ಲಿಂ ಸಾಮರಸ್ಯದ ತಾಳವಾಡಿ ಉತ್ಸವ
ತಾಳವಾಡಿ ತಮಿಳುನಾಡು ಗಡಿ ಜಿಲ್ಲೆ ಈರೋಡು ತಾಲ್ಲೂಕಿನ ಸತ್ಯಮಂಗಲಂ ತಾಲ್ಲೂಕಿನ ಹೋಬಳಿ ಕೇಂದ್ರ. ಚಾಮರಾಜನಗರದಿಂದ ಕೇವಲ 22 ಕಿ.ಮೀ. ದೂರದಲ್ಲಿರುವ ಗಡಿ ಗ್ರಾಮ. ತಾಳವಾಡಿ ತಮಿಳುನಾಡಿನಲ್ಲಿದ್ದರೂ ಆ ಹೋಬಳಿಯ (ಫಿರ್ಕಾ) ಎಲ್ಲಾ 56 ಗ್ರಾಮಗಳಲ್ಲಿ ಬಹುತೇಕ ಕನ್ನಡಿಗರೇ ಇರುವುದು ವಿಶೇಷ. ಕನ್ನಡ ವರನಟ ಡಾ.ರಾಜ್ಕುಮಾರ್ ಅವರ ಹುಟ್ಟೂರು ಗಾಜನೂರು ಕೂಡ ತಾಳವಾಡಿಯಿಂದ ಕೇವಲ 1 ಕಿ.ಮೀ. ದೂರದಲ್ಲಿದೆ.
ತಾಳವಾಡಿ ತಮಿಳುನಾಡಿನಲ್ಲಿದ್ದರೂ ಅವರ ವ್ಯಾಪಾರ, ವಹಿವಾಟು, ಸಂಬಂಧ ಎಲ್ಲವೂ ಕರ್ನಾಟಕದ ಚಾಮರಾಜನಗರ ಮತ್ತು ಸುತ್ತಲಿನ ಜಿಲ್ಲೆಗಳೊಂದಿಗೆ ಬೆಸೆದುಕೊಂಡಿದ್ದಾರೆ. ಇಂಥ ಊರಿನಲ್ಲಿ ಕಳೆದ 150 ವರ್ಷಗಳಿಂದ ಮಾರಿಯಮ್ಮ ಜಾತ್ರಾ ಮಹೋತ್ಸವ ನಡೆದುಕೊಂಡು ಬಂದಿದ್ದು, ಇದು ಇತರೆ ಕಡೆಗಳಲ್ಲಿ ನಡೆಯುವ ಮಾರಿ ಹಬ್ಬಗಳಂತಲ್ಲ. ಇಲ್ಲಿ ಕೋಮು ಸೌಹಾರ್ದತೆ ಇದೆ. ಹಿಂದೂ- ಮುಸ್ಲಿಂರ ಸಹೋದರತೆ ಇದೆ. ಊರಿನ ಎಲ್ಲಾ 18 ಜಾತಿಗಳು ಕೂಡಿ ಒಗ್ಗಟ್ಟಿನಿಂದ ಜಾತಿ, ಧರ್ಮಗಳ ಭೇದವಿಲ್ಲದೆ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.
ಅಂತೆಯೇ ಬುಧವಾರ ರಾತ್ರಿಯಿಂದಲೇ ತಾಳವಾಡಿಯಲ್ಲಿ ಮಾರಿಯಮ್ಮ ದೇವರ ಜಾತ್ರಾ ಮಹೋತ್ಸವ ನಡೆಯಿತು. ಅಹೋರಾತ್ರಿ ದೇವರ ಉತ್ಸವ, ರಾತ್ರಿ ದೇವರಿಗೆ ತಂಪು ಸೇವೆ ನಡೆಯಿತು. ಕರಗ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇಲ್ಲಿ ಮುಸ್ಲಿಮ್ ಕುಟುಂಬಗಳೂ ಕೂಡ ಮಾರಿಯಮ್ಮ ದೇವರಿಗೆ ಪೂಜೆ ಸಲ್ಲಿಸುವುದು ಗಮನಾರ್ಹ. ಮಾರನೇ ದಿನ ಗುರುವಾರ ಬೆಳಗಿನ ಜಾವ ಗುಂಬ ಪೂಜೆ ನಡೆದು ದೇವರಿಗೆ ಎಡೆ ಕೊಡುವುದು. ಬಿಸಿ ಅನ್ನವನ್ನು ಕೈಯಿಂದಲೇ ತುಂಬುವುದು. ಬಳಿಕ ದೇವರಿಗೆ ಹೊಳೆಯಲ್ಲಿ ಸ್ನಾನ ಮಾಡಿಸಿ ವೈಭವದ ಉತ್ಸವದ ಮೂಲಕ ಮಾರಿಯಮ್ಮ ದೇವಾಲಯದ ಮುಂದೆ ಮೊದಲೇ ಹಾಕಲಾಗಿರುವ ಕೊಂಡದ ಮೇಲೆ ದೇವರು ನಡೆಯುವುದು.
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಶೇಷವೆಂದರೆ ಮಾರಿಯಮ್ಮ ದೇವಾಲಯ ಮತ್ತು ವೇಣುಗೋಪಾಲಸ್ವಾಮಿ ದೇವಾಲಯದ ಮಧ್ಯೆ ಮುಸ್ಲಿಮರ ಮಸೀದಿ ಇದೆ. ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಮಸೀದಿ ನಡುವೆ ಇರುವುದು ಒಂದೇ ಗೋಡೆ. ಆದರೆ ಅಷ್ಟೇ ಕೋಮು ಸಾಮರಸ್ಯವೂ ಇದೆ. ಕೊಂಡ ಹಾಯುವುದೂ ಕೂಡ ಮಸೀದಿ ಮುಂದೆಯೇ ನಡೆಯುತ್ತದೆ. ಈ ಸಂದರ್ಭದಲ್ಲಿ ಮುಸ್ಲಿಮರೂ ಕೊಂಡೋತ್ಸವ ಸಂದರ್ಭದಲ್ಲಿ ಹಾಜರಿದ್ದು ಸಂಭ್ರಮಪಡುತ್ತಾರೆ. ಅಂಥದ್ದೊಂದು ವಿಶಿಷ್ಟ ಹಬ್ಬ ಗುರುವಾರ ವಿಜೃಂಭಣೆಯಿಂದ ನಡೆಯಿತು.