ನೊಬೆಲ್ ಪುರಸ್ಕೃತನ ವಜಾಕ್ಕೆ ಹೈಕೋರ್ಟ್ 'ಸಹ'ಮತಿ

ಗ್ರಾಮೀಣ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಸ್ಥಾನದಿಂದ ತಮ್ಮನ್ನು ತೆಗೆದುಹಾಕಿರುವ ಸೆಂಟ್ರಲ್ ಬ್ಯಾಂಕ್ ಆದೇಶವನ್ನು ಪ್ರಶ್ನಿಸಿ 70 ವರ್ಷದ ಯೂನಸ್ ಹೈಕೋರ್ಟ್ ಮೊರೆ ಹೋಗಿದ್ದರು. 1983 ರಲ್ಲಿ ಗ್ರಾಮೀಣ ಬ್ಯಾಂಕ್ ಅನ್ನು ಸ್ಥಾಪಿಸಿ, ಸ್ವತಃ ಅದರ ಕಾರ್ಯಕಾರಿ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮುನ್ನ ಸೆಂಟ್ರಲ್ ಬ್ಯಾಂಕ್ ನ (ಬಾಂಗ್ಲಾದೇಶ ಬ್ಯಾಂಕ್) ಅಪ್ಪಣೆ ಪಡೆದಿರಲಿಲ್ಲ. ಪ್ರಸ್ತುತ ಅವರು ನಿವೃತ್ತಿ ನೀತಿಯನ್ನೂ ಮೀರಿ ನಡೆಯುತ್ತಿದ್ದಾರೆ ಎಂಬ ಪ್ರತಿವಾದವನ್ನು ಹೈಕೋರ್ಟ್ ನ ಇಬ್ಬರು ಸದಸ್ಯರ ಪೀಠ ಎತ್ತಿಹಿಡಿದಿದೆ.
'ನಮ್ಮ ವಾದ ಸರಿಯಾಗಿಯೇ ಇತ್ತು. ಆದರೂ ಏಕೋ ಹಿಂಗಾಯ್ತು' ಎಂದು ಯೂನಸ್ ಪರ ಕಿರಿಯ ವಕೀಲ ಅಲವತ್ತುಕೊಂಡರು. ಅಟಾರ್ನಿ ಜನರಲ್, ಸೆಂಟ್ರಲ್ ಬ್ಯಾಂಕ್ ನ್ಯಾಯವಾದಿಗಳು ತೀರ್ಪು ಹೊರಬೀಳುವ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದರು. ತೀರ್ಪು ಪ್ರಕಟವಾಗುವಾಗ ಯೂನಸ್ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಇದರಿಂದ ಅವರು ಮೇಲ್ಮನವಿ ಸಲ್ಲಿಸುವ ಬಗ್ಗೆ ತಕ್ಷಣಕ್ಕೆ ತಿಳಿದುಬಂದಿಲ್ಲ. ಪ್ರಧಾನಿ ಷೇಕ್ ಹಸೀನಾರ ಕಟು ವಿರೋಧಿ ಯೂನಸ್, 2007ರಲ್ಲಿ ದೇಶದ ಸೇನೆಯ ಜತೆಗೂಡಿ ತಮ್ಮದೇ ಪಕ್ಷ ಸ್ಥಾಪಿಸಲು ಮುಂದಾಗಿದ್ದರು.












Click it and Unblock the Notifications