ಮೈಸೂರು ವಿವಿ ಲೈಂಗಿಕ ಕಿರುಕುಳ, ದೂರಿದ್ದಕ್ಕೆ ಬೆದರಿಕೆ

ಆತ್ಮಹತ್ಯೆಗೆ ಯತ್ನಿಸಿದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಸರಿತಾ ಮಾ.1ರಂದು ಪ್ರೊ.ಶಿವಬಸವಯ್ಯ ವಿರುದ್ಧ ಕುಲಪತಿ ವಿಜಿ ತಳವಾರ್ ಅವರಿಗೆ ದೂರು ನೀಡಿದ್ದರು. ಮಾ.3ರಂದು ಪ್ರೊ.ಶಿವಬಸವಯ್ಯರನ್ನು ವಿಚಾರಣೆ ನಡೆಸಿ ವಿದ್ಯಾರ್ಥಿನಿ ಮಾಡಿರುವ ಆರೋಪವನ್ನು ಕುಲ ಸಚಿವರು ತಳ್ಳಿಹಾಕಿದ್ದರು. ಬದಲಿಗೆ ಸರಿತಾರ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅವಮಾನಿಸಿದ್ದರು. ನಂತರ, ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಸರಿತಾರ ಪತಿ ಮೈಸೂರು ವಿವಿ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಪ್ರಾಣಿಶಾಸ್ತ್ರದ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ಶಿವಬಸವಯ್ಯ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರೆಸಿರುವ ವಿದ್ಯಾರ್ಥಿನಿ ಸರಿತಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಕೆಯನ್ನು ಬಿಎಂ ಆಸ್ಪತ್ರೆಗೆ ಸೇರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಉಪಚರಿಸಲಾಗುತ್ತಿದೆ. ಆಕೆಯಿಂದ ಹೇಳಿಕೆ ಇನ್ನೂ ಪಡೆಯಲಾಗಿಲ್ಲ ಎಂದು ವಿಜಯನಗರ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.
ಈ ನಡುವೆ ಮಾ.5ರಂದು ಪ್ರೊ.ಶಿವಬಸವಯ್ಯ ಅವರಿಗೆ ನೋಟಿಸ್ ಜಾರಿ ಮಾಡಿ ಲಿಖಿತ ರೂಪದಲ್ಲಿ ವಿವರಣೆ ಕೇಳಲಾಗಿದೆ. ಸರಿತಾ ಸಂಶೋಧನೆಯನ್ನು ಮುಂದುವರೆಸಬಹುದಾಗಿದ್ದು, ಬೇರೆ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಳ್ಳಬಹುದು. ಸಂಶೋಧನಾ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಿಂದ ನೀಡಲಾಗುವ 60 ಸಾವಿರ ರೂ.ಗಳ ವಿದ್ಯಾರ್ಥಿ ವೇತನವನ್ನು ಯಾರಿಗೆ ನೀಡಬೇಕು ಎಂಬುವುದು ಮಾರ್ಗದರ್ಶಕರು ನಿರ್ಧರಿಸಲಿದ್ದಾರೆ.












Click it and Unblock the Notifications