ಉಡುಪಿ ವಿದ್ಯುತ್ ಘಟಕ : ಪೇಜಾವರಶ್ರೀ ಆಂದೋಲನ

1200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿರುವ ಘಟಕದ ಸುತ್ತಲಿನ ಪ್ರದೇಶಗಳಾದ ಪಡೆಬೆಟ್ಟು, ಸಂತೂರು ಮತ್ತು ಯೆರ್ಮಾಳ್ ಗ್ರಾಮಕ್ಕೆ ಭೇಟಿ ನೀಡಿದ ನಂತರ ಸ್ವಾಮೀಜಿಗಳು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪರಿಸರವನ್ನು ಹಾಳುಗೆಡವುತ್ತಿರುವ ಕಂಪನಿ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸದ ನಂತರವೇ ಮಾತುಕತೆಗೆ ತಾವು ಸಿದ್ಧರಿರುವುದಾಗಿ ಅವರು ಹೇಳಿದರು.
ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಈ ಯೋಜನೆಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಈ ಯೋಜನೆಯಿಂದ ಗ್ರಾಮಸ್ಥರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಅನ್ಯಾಯವೂ ಆಗಿದೆ. ಕ್ರಮ ಕೈಗೊಳ್ಳದಿದ್ದರೆ ನಿರಶನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶ್ರೀಗಳು ಖಡಾಖಂಡಿತವಾಗಿ ನುಡಿದರು.
ತೆರೆದ ವಾಹನಗಳಲ್ಲಿ ತ್ಯಾಜ್ಯವಸ್ತುಗಳನ್ನು ಗುಂಡಿಗಳಲ್ಲಿ ಹಾಕುವಾಗ ಹಾರುತ್ತಿರುವ ಬೂದಿ ಪರಿಸರವನ್ನು ಕಲ್ಮಷಗೊಳಿಸುತ್ತಿದೆ ಎಂದು ಸಂತೂರು ಮತ್ತು ಯೆರ್ಮಾಳ್ ಗ್ರಾಮಸ್ಥರು ದೂರಿದ್ದಾರೆ. ರಾಸಾಯನಿಕ ಇರುವ ತ್ಯಾಜ್ಯವಸ್ತು ಆಹಾರ ಉತ್ಪಾದನೆಯ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಪೇಜಾವರ ಶ್ರೀಗಳು ಆರಂಭಿಸಿರುವ ಆಂದೋಲನಕ್ಕೆ ಮಹಿಳಾ ಸಂಘಟನೆಗಳು ಕೂಡ ಕೈಜೊಡಿಸಿವೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಗುರುವಾರ ಮಂಡಿಸಿರುವ ಸಾಮಾನ್ಯ ಮುಂಗಡ ಪತ್ರದಲ್ಲಿ ಈ ವಿದ್ಯುತ್ ಘಟಕದ ಅಭಿವೃದ್ಧಿಗಾಗಿ 25 ಕೋಟಿ ರು. ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪನವರು ಆ ಪ್ರಾಂತ್ಯದ ಗ್ರಾಮಸ್ಥರ ಕೂಗಿಗೆ ಕಿವಿಗೊಡದಿರುವುದು ಇದರಿಂದ ಸ್ಪಷ್ಟವಾಗಿದೆ. ವಿದ್ಯುತ್ ಘಟಕದ ವಿರುದ್ಧ ನಡೆಯುತ್ತಿರುವ ಚಳವಳಿ ಇನ್ನೂ ತೀವ್ರ ಸ್ವರೂಪ ಪಡೆದರೂ ಆಶ್ಚರ್ಯವಿಲ್ಲ.












Click it and Unblock the Notifications