ಬಿಜೆಪಿ ಮೇಲೂ ವಾಮಾಚಾರ ಪ್ರಯೋಗಿಸಿ: ಸಿದ್ದುಗೆ ಖರ್ಗೆ ಕರೆ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಡಿ.ಕೆ. ಶಿವಕುಮಾರ್, ಹಿರಿಯ ನಾಯಕ ಜನಾರ್ದನ ಪೂಜಾರಿ, ಆರ್.ವಿ.ದೇಶಪಾಂಡೆ, ಇಬ್ರಾಹಿಂ ಸೇರಿದಂತೆ ಅನೇಕ ನಾಯಕರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ ಸಾರೋಟ್ನಲ್ಲಿ ಮೆರವಣಿಗೆ ಮೂಲಕ ಸಮಾವೇಶ ತಲುಪಿದ್ದು ವಿಶೇಷವಾಗಿತ್ತು.
ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ದೌಡಾಯಿಸುವ ತರಾತುರಿಯಲ್ಲಿ ಭಾಷಣ ಆರಂಭಿಸಿದರು. ಅವರು ಯಡಿಯೂರಪ್ಪ ಆಡಳಿತದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಭರಪೂರ ವಾಗ್ದಾಳಿ ನಡೆಸಿದರು. ಭಾಷಣದ ತುಣುಕು ಹೀಗಿದೆ: ಸಿದ್ದರಾಮಮಯ್ಯನವರೇ ಅದೇನೋ ಯಡಿಯೂರಪ್ಪ ವಿರುದ್ಧ ವಾಮಾಚಾರ ನಡೆಸಿದ್ದೀರಂತೆ ಹೌದಾ? ಎಂದು ಪ್ರಶ್ನಾರ್ಥಕವಾಗಿ ಭಾಷಣ ಆರಂಭಿಸಿದ ಖರ್ಗೆ, ವಾಮಾಚಾರವನ್ನು ಯಡಿಯೂರಪ್ಪ ಅವರೊಬ್ಬರಿಗೇ ಸೀಮಿತಗೊಳಿಸಬೇಡಿ. ಇಡೀ ಬಿಜೆಪಿ ಪಕ್ಷದ ಮೇಲೆ ವಾಮಾಚಾರ ಪ್ರಯೋಗಿಸಿ, ಅದನ್ನು ಬೇರು ಸಮೇತ ಕಿತ್ತೊಗೆಯಿರಿ ಎಂದು ಸಿದ್ದುಗೆ ಗುದ್ದು ಕೊಟ್ಟರು.
ಹಿರಿಯ ನಾಯಕ ಜನಾರ್ದನ ಪೂಜಾರಿ ಮಾತನಾಡಿ, ಕಾಂಗ್ರೆಸ್ ಕೈಗೊಂಡಿದ್ದ ಯೋಜನೆಗಳ ಫಲವನ್ನು ಬಿಜೆಪಿ ಅನುಭವಿಸುತ್ತಿದೆ. ಯೋಜನೆಗಳೆಲ್ಲ ಕಾಂಗ್ರೆಸ್ದ್ದು, ಮತ ಮತ್ತು ಅಧಿಕಾರ ಮಾತ್ರ ಬಿಜೆಪಿಗೆ ಇದು ಯಾವ ನ್ಯಾಯ ಆರು ಕೋಟಿ ಕನ್ನಡಿಗರೇ ಎಂದು ರಾಜ್ಯದ ಜನತೆನ್ನು ಬಡಿದೆಬ್ಬಿಸಿದರು.
ಇದು ನಾಡ ರಕ್ಷಣೆಯ ಜತೆಗೆ ಬಿಜೆಪಿ ನಿರ್ನಾಮ ಯಾತ್ರೆಗೂ ಈ ರ್ಯಾಲಿಯಿಂದ ಚಾಲನೆ ನೀಡಲಾಗಿದೆ. ಕಾಂಗ್ರೆಸ್ನಿಂದಲೇ ನಾಡಿನ ರಕ್ಷಣೆ ಸಾಧ್ಯ. ಭ್ರಷ್ಟ ಮುಖ್ಯಮಂತ್ರಿ ಎಂದು ಎಲ್ಲೆಡೆಯಿಂದಲೂ ಹಣೆಪಟ್ಟಿ ಹಚ್ಚಿಕೊಂಡಿರುವ ಯಡಿಯೂರಪ್ಪನವರ ಹಣೆಬರಹವನ್ನು ರಾಜ್ಯದ ಜನತೆ ಶೀಘ್ರವೇ ಬರೆಯಬೇಕು. ಆದ್ದರಿಂದ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಕಾಂಗ್ರೆಸ್ ಪಕ್ಷವು ಈ ಸಮಾವೇಶವನ್ನು ಈ ಹಿಂದೆಯೇ ಹಮ್ಮಿಕೊಂಡಿತ್ತಾದರೂ ಮಾಜಿ ಉಪಮುಖ್ಯಮಂತ್ರಿ ಎಂಪಿ ಪ್ರಕಾಶ್ ಅವರ ನಿಧನದಿಂದಾಗಿ ಒಂದು ವಾರ ಮುಂದೂಡಿತ್ತು.











Click it and Unblock the Notifications