ಮಲೆ ಮಹದೇಶ್ವರಬೆಟ್ಟದಲ್ಲಿ ಅಗ್ನಿ: 50 ಅಂಗಡಿ ಭಸ್ಮ

ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಅಂಗಡಿಯೊಂದರಲ್ಲಿ ಉಂಟಾದ ಶಾರ್ಟ್ ಸರ್ಕ್ಯುಟ್ನಿಂದ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದ್ದು, ಕ್ಷಣ ಮಾತ್ರದಲ್ಲಿ ಬೆಂಕಿಯ ಕೆನ್ನಾಲಗೆ ಇತರೆ ಅಂಗಡಿಗಳಿಗೂ ವ್ಯಾಪಿಸಿತು. ರಾತ್ರಿಯಾದ್ದರಿಂದ ಅಂಗಡಿಗಳಲ್ಲಿ ಜನಸಂದಣಿ ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.
ಬೇಸಿಗೆ ಸಮೀಪಿಸುತ್ತಿದ್ದಂತೆ ಬಯಲುಸೀಮೆ ಪ್ರದೇಶಗಳಲ್ಲಿ ಕಾಡಿನ ಬೆಂಕಿ ಹಾವಳಿಯೂ ಕಾಣಿಸಿಕೊಳ್ಳಲಾರಂಭಿಸಿದೆ. ಇಲ್ಲಿನ ಜನ ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ. ಅದರಲ್ಲೂ ದೂರದ ಊರುಗಳಲ್ಲಿ ಅಗ್ನಿಶಾಮಕ ವ್ಯವಸ್ಥೆ ಇಲ್ಲದೆಡೆ ಅಗ್ನಿ ಪ್ರಮಾದಗಳು ತೀಕ್ಷ್ಣವಾಗುವ ಸಾಧ್ಯತೆಗಳಿರುತ್ತವೆ.
ಹೋಟೆಲ್, ಪಾತ್ರೆ, ಬಟ್ಟೆ, ಗೊಂಬೆ ಅಂಗಡಿಗಳು ಸೇರಿದಂತೆ ನಾನಾ ರೀತಿಯ ಅಂಗಡಿಗಳು ಸುಟ್ಟು ನಾಶವಾಗಿವೆ. ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ. ಮೊದಲ ಅಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡ ಹಿನ್ನೆಲೆಯಲ್ಲಿ ಬೆಂಕಿ ಇತರೆ ಅಂಗಡಿಗಳಿಗೂ ಹಬ್ಬಲು ಕಾರಣವಾಯಿತು ಎಂದು ಹೇಳಲಾಗಿದೆ. ಒಟ್ಟಾರೆ 8 ಸಿಲಿಂಡರ್ಗಳು ಸ್ಫೋಟಗೊಂಡಿದ್ದು, ನಷ್ಟದ ಅಂದಾಜು 50 ಲಕ್ಷಕ್ಕು ಹೆಚ್ಚಿರಬಹುದು ಎಂದು ತಿಳಿದುಬಂದಿದೆ.
ಭಕ್ತಾದಿಗಳ ಸಹಕಾರ: ಬೆಂಕಿಯ ಜ್ವಾಲೆ ವ್ಯಾಪಿಸುತ್ತಿರುವುದನ್ನು ಕಂಡು ಹೌಹಾರಿದ ಭಕ್ತಾದಿಗಳೇ ಬೆಂಕಿ ನಂದಿಸುವಲ್ಲಿ ಪೊಲೀಸರಿಗೆ ಸಹಕಾರ ನೀಡಿದ್ದಾರೆ. ಬೆಟ್ಟದಲ್ಲಿ ಅಗ್ನಿ ಶಾಮಕ ದಳ ಇಲ್ಲದ ಕಾರಣ ಅದು ದೂರದ ಹನೂರಿನಿಂದ ಬರಬೇಕಾಗಿತ್ತು. ಅವರು ಬರುವುದರೊಳಗೆ ಸಾಕಷ್ಟು ಹಾನಿ ಸಂಭವಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು. ಮಹದೇಶ್ವರಬೆಟ್ಟ ಸಿಪಿಐ ಗಂಗಲಿಂಗಯ್ಯ, ಪಿಎಸ್ಐ ದೀಪಕ್ ಮತ್ತು ರೇವಣ್ಣಸಿದ್ದಯ್ಯ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂಸದ, ಶಾಸಕರ ಭೇಟಿ: ಚಾಮರಾಜನಗರ ಸಂಸತ್ ಸದಸ್ಯ ಆರ್. ಧ್ರುವನಾರಾಯಣ್, ಹನೂರು ಶಾಸಕ ಆರ್. ನರೇಂದ್ರ ಸೋಮವಾರ ಬೆಳಗ್ಗೆ ಬೆಟ್ಟಕ್ಕೆ ಭೇಟಿ ನೀಡಿ ಬೆಂಕಿ ಅನಾಹುತವನ್ನು ಅವಲೋಕಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಷ್ಟಕ್ಕೊಳಗಾದ ಅಂಗಡಿ ಮಾಲಿಕರಿಗೆ ನಷ್ಟ ದೊರಕಿಸಿಕೊಡುವ ಭರವಸೆ ನೀಡಿದರು.












Click it and Unblock the Notifications