ಧೂಮಪಾನಿಗಳ ಕೆಲಸದ ಅರ್ಜಿ ಕಸದಬುಟ್ಟಿಗೆ

ಸೇದುವುದು ಬಿಡುವುದು ಅವರವರ ಇಷ್ಟಕಷ್ಟಗಳ ಮೇಲೆ ನಿರ್ಧಾರವಾಗಿರುತ್ತದೆ. ಕೇಂದ್ರದ ಬಜೆಟ್ಟಲ್ಲಿ ಸಿಗರೇಟ್ ಬೆಲೆ ಎಷ್ಟೇ ಏರಿಸಿದರೂ ದಿನಕ್ಕೆ ಹತ್ತು ಪ್ಯಾಕ್ ಸುಟ್ಟು ಬೂದಿ ಮಾಡುವವರೂ ಇದ್ದಾರೆ. ಕೆಲವರು, ಬೆಲೆ ಏರಿಸಿದ್ದವರ ಮೇಲೆ ಸೇಡು ತೀರಿಸಿಕೊಳ್ಳುವವರಂತೆ ಸೇದುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಫ್ಟ್ ವೇರ್ ಕಂಪನಿಗಳು ಸೇರಿದಂತೆ ಅನೇಕ ಸಂಸ್ಥೆಗಳು ತಮ್ಮ ಕಚೇರಿ ಆವರಣದಲ್ಲಿ ಸಿಗರೇಟು ಸೇದುವುದನ್ನು ನಿಷೇಧಿಸಿವೆ. ನಿರ್ಬಂಧ ಮೀರಿ ಸೇದಿದರೆ ದಂಡವನ್ನೂ ವಿಧಿಸುತ್ತಿವೆ. ಇನ್ನು, ಸಾರ್ವಜನಿಕ ತಾಣಗಳಾದ ಬಸ್, ರೈಲು ನಿಲ್ದಾಣ, ಸಿನೆಮಾ ಥಿಯೇಟರು, ಹೊಟೇಲು ಮುಂತಾದೆಡೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧವಿದ್ದರೂ ಸೇದುವವರ ಕೊರಳಿಗೆ ಗಂಟೆ ಕಟ್ಟುವವರು ಇನ್ನೂ ಹುಟ್ಟಿಲ್ಲ.
ಈಗ ಹೊಸ ಬೆಳವಣಿಗೆಯೇನೆಂದರೆ, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಧೂಮಪಾನ ಹವ್ಯಾಸವನ್ನು ಬೇರಿನಲ್ಲೇ ಚಿಗುಟಿಹಾಕುವ ಮಹತ್ ಕಾರ್ಯಕ್ಕೆ ಮುಂದಾಗಿವೆ. ಧೂಮಪಾನಿಗಳ ಕೆಲಸದ ಅರ್ಜಿಗಳನ್ನು, ಸಿಗರೇಟು ಸುಟ್ಟು ಮೇಲೆ ಬೂದಿಬುಟ್ಟಿಗೆ ತುರುಕುವಂತೆ ಮುಲಾಜಿಲ್ಲದೆ ಕಸದಬುಟ್ಟಿಗೆ ತುರುಕುತ್ತಿವೆ. ಕೆಲಸದ ಸ್ಥಳದಲ್ಲಿ ಆರೋಗ್ಯ ಸಂಬಂಧಿ ಖರ್ಚುಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯದ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ಈ ಹೊಸ ನೀತಿಯನ್ನು ಜಾರಿಯಲ್ಲಿ ತರುತ್ತಿವೆ. ಸ್ವಾಗತಾರ್ಹ ಬೆಳವಣಿಗೆ.
ಸಿಗರೇಟು ಸೇದುವುದರ ನಿಷೇಧ, ದಂಡ ವಿಧಿಸುವಿಕೆ, ಸೇದುವವರ ಆರೋಗ್ಯ ವಿಮೆಯ ಕಂತನ್ನು ಹೆಚ್ಚಿಸುವ ಕ್ರಮ ಕೈಗೊಂಡರೂ ಈ ಚಟವನ್ನು ತಹಬದಿಗೆ ತರಲಾಗದಿದ್ದುದರಿಂದ ಅರ್ಜಿಯನ್ನು ನಿರಾಕರಿಸುವ ಮತ್ತು ಸೇದುವವರನ್ನು ಕೆಲಸದಿಂದ ತೆಗೆದುಹಾಕುವ ಕ್ರಮ ಕೈಗೊಳ್ಳುತ್ತಿವೆ. ಇದಕ್ಕೆ ಸಿಗರೇಟು ಸೇದದ ವರ್ಗ ಕೂಡ ವಿರೋಧ ವ್ಯಕ್ತಪಡಿಸಿರುವುದು ಹೊಸ ನೀತಿ ಜಾರಿಗೆ ಹಿಂದೇಟು ಹಾಕಿಲ್ಲ.
ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯಬೇನೆ ಸೇರಿದಂತೆ ಅನೇಕ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ. ಸಿಗರೇಟು ತ್ಯಜಿಸಲು ಸಹಕಾರಿಯಾಗುವಂಥ ನಿಕೋರೆಟ್ ನಂಥ ಕೆಲ ಪ್ರಾಡಕ್ಟ್ ಗಳು ಕೂಡ ಮಾರುಕಟ್ಟೆಗೆ ಬಂದಿವೆ. ಸಿಗರೇಟಿನ ಹೊಗೆಯಿಂದಾಗಿ ಸೇದುವವರು ಮಾತ್ರವಲ್ಲ ಪರೋಕ್ಷವಾಗಿ ಸೇದದವರೂ ತೊಂದರೆಗೀಡಾಗುತ್ತಿದ್ದಾರೆ. ಸಿಗರೇಟು ಸೇದುವ ವಿಷಯಕ್ಕೆ ಬಂದರೆ ತಾವೂ ಕಡಿಮೆಯಿಲ್ಲ ಎಂಬಂತೆ ಮಹಿಳೆಯರು ಪೈಪೋಟಿಗೆ ಬಿದ್ದಿರುವುದು.
ಆದರೆ, ಇದು ಜಾರಿ ಬಂದಿರುವುದು ಅಮೆರಿಕಾದಲ್ಲಿ. ಇದನ್ನು ಕರ್ನಾಟಕದಲ್ಲಿಯೂ ಯಾಕೆ ಜಾರಿಗೆ ತರಬಾರದು? ಸಿಗರೇಟು, ಕುಡಿತ ಸೇರಿದಂತೆ ಮತ್ತಾವುದೇ ದುಶ್ಚಟಗಳನ್ನು ಅಂಟಿಸಿಕೊಂಡಿರದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಈ ಕುರಿತಂತೆ ಯಾಕೆ ಚಿಂತನೆ ಮಾಡಬಾರದು?












Click it and Unblock the Notifications