ಮೈಸೂರಿನಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಏಕೆ?
ಮೈಸೂರನ್ನು ಕಾಂಗ್ರೆಸ್ನ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಇಲ್ಲಿ ಸಿದ್ದರಾಮಯ್ಯರವರ ಪ್ರಾಬಲ್ಯವೂ ಇತ್ತು ಹೀಗಾಗಿ ಈ ಬಾರಿಯ ಜಿಲ್ಲಾ ಪಂಚಾಯಿತಿಯ ಅಧಿಕಾರವನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿದೆ ಎಂಬ ಪ್ರಬಲ ನಂಬಿಕೆ ಕಾಂಗ್ರೆಸ್ ನಾಯಕರಲ್ಲಿತ್ತು. ಆದರೆ ಚುನಾವಣೆ ನಡೆದು ಫಲಿತಾಂಶ ಬಂದಾಗ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
ಒಟ್ಟು 46 ಕ್ಷೇತ್ರಗಳನ್ನು ಹೊಂದಿರುವ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ 21 ಸ್ಥಾನವನ್ನು ಪಡೆಯುವ ಮೂಲಕ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಉಳಿದಂತೆ ಜೆಡಿಎಸ್ 16, ಬಿಜೆಪಿ 8, ಪಕ್ಷೇತರರು 1 ಸ್ಥಾನವನ್ನು ಪಡೆದಿದ್ದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮೂಲಕ ಜಿ.ಪಂ. ಅಧಿಕಾರವನ್ನು ನಡೆಸಲು ಕಸರತ್ತು ನಡೆದಿತ್ತು. ಅಧ್ಯಕ್ಷ ಸ್ಥಾನವನ್ನು ತಮಗೆ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಆದರೆ ಜೆಡಿಎಸ್ ಅಧ್ಯಕ್ಷಗಾದಿಯನ್ನು ಬಿಟ್ಟು ಕೊಡಲು ತಯಾರಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುರಿದು ಬಿದ್ದಿತ್ತು.
ಬಳಿಕ ಭಾರೀ ಬೆಳವಣಿಗೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ನಡೆದಿದ್ದು, ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಜೆಡಿಎಸ್ ನೀಡಲಾಗಿದ್ದು ಅದರಂತೆ ಜೆಡಿಎಸ್ನ ಸುನೀತಾ ವೀರಪ್ಪಗೌಡ ಅಧ್ಯಕ್ಷರಾಗಿಯೂ, ಬಿಜೆಪಿಯ ಡಾ.ಶಿವರಾಮ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಬೆಳವಣಿಗೆ ರಾಜಕೀಯ ರಂಗದಲ್ಲಿ ಭಾರೀ ಕುತೂಹಲವನ್ನು ಕೆರಳಿಸಿದ್ದು, ಅಧಿಕಾರಕ್ಕಾಗಿ ಜೆಡಿಎಸ್ ಯಾರೊಂದಿಗೂ ಬೇಕಾದರೂ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂಬುವುದನ್ನು ಮತ್ತೆ ಸಾಬೀತುಪಡಿಸಿದೆ. ಮುಂದೆ ಏನಾಗುತ್ತದೆಯೋ ಎಂಬುವುದನ್ನು ಕಾದುನೋಡಬೇಕಿದೆ.