ಬೆಂಗಳೂರು ಆಗಸದಲಿ ಮಿಂಚಲಿದೆ ಬಾಲಿವುಡ್ ತಾರೆ
ಹೌದು, ಯುವ ಚಿತ್ರಪ್ರೇಮಿಗಳ ಹೃದಯದರಸ ಬಾಲಿವುಡ್ ತಾರೆ ಶಾಹೀದ್ ಕಪೂರ್ ಎಫ್-16 ಫೈಟರ್ ಜೆಟ್ ವಿಮಾನವನ್ನು ಏರಿ ಆಗಸ ಮಾತ್ರವಲ್ಲ ಭೂಮಿಯ ಮೇಲೆಯೂ ಮಿಂಚಿನ ಸಂಚಾರ ಮಾಡಲಿದ್ದಾರೆ. 30 ರಾಷ್ಟ್ರಗಳ ವೈಮಾನಿಕ ಪ್ರದರ್ಶನ ನೋಡುವುದರ ಜೊತೆಗೆ ಶಾಹೀದ್ ಕಪೂರ್ ಅವರನ್ನು ಕೂಡ ನೋಡಲು ಜನ ಸಾಗರದೋಪಾದಿಯಲ್ಲಿ ಬರುತ್ತಿದ್ದಾರೆ. ಶಾಹೀದ್ ಈಗಾಗಲೆ ವಾಯುನೆಲೆಗೆ ಬಂದಿದ್ದು, ಅವರನ್ನು ನೋಡಲು ಹಾತೊರೆಯುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು ಭದ್ರತಾ ಪಡೆ ಹರಸಾಹಸ ಪಡುತ್ತಿದೆ. ಶಾಹೀದ್ ಕಪೂರ್ ಅವರಿಗೆ ಭಾರೀ ಬಿಗಿಭದ್ರತೆ ಒದಗಿಸಲಾಗಿದೆ.
ಇದಕ್ಕೂ ಮೊದಲು ಲಾಖೀಡ್ ಮಾರ್ಟಿನ್ ಏರೋನಾಟಿಕ್ಸ್ ಕಂಪನಿ ನಿರ್ದೇಶಿಸಿದ್ದ ಕೆಲ ತರಬೇತಿ ಪರೀಕ್ಷೆಯಲ್ಲಿ ಶಾಹೀದ್ ಪಾಲ್ಗೊಳ್ಳಬೇಕಾಯಿತು. ತಂದೆ ಪಂಕಜ್ ಕಪೂರ್ ಅವರು ನಿರ್ದೇಶನದಲ್ಲಿ ಶಾಹೀದ್ ನಟಿಸುತ್ತಿರುವ ಮೌಸಮ್ ಚಿತ್ರದಲ್ಲಿ ವಾಯುಸೇನಾ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಸಹಜ ಅನುಭವ ಪಡೆಯಲೆಂದು ಶಾಹೀದ್ ಜೆಟ್ ವಿಮಾನ ಹಾರಾಟ ನಡೆಸಲಿದ್ದಾರೆ.
ಕ್ರಿಕೆಟ್ ವಿಶ್ವಕಪ್ 2011 ಆರಂಭವಾಗುವ ಮುನ್ನ ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯವಾಡಲು ಬಂದಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಯುದ್ಧ ವಿಮಾನವೇರಲು ಉತ್ಸುಕತೆ ತೋರಿದ್ದಾರೆ ಎನ್ನಲಾಗಿದೆ. ಅವರೊಂದಿಗೆ, ಸೇನಾ ಪಡೆಯಲ್ಲಿ ಗೌರವ ಗ್ರೂಪ್ ಕ್ಯಾಪ್ಟನ್ ಆಗಿರುವ ಸಚಿನ್ ತೆಂಡೂಲ್ಕರ್ ಕೂಡ ಯಲಹಂಕ ವಾಯುನೆಲೆಗೆ ಬರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಪ್ರವೇಶ ಗೊಂದಲ : ಸಾರ್ವಜನಿಕರಿಗೆ ಶನಿವಾರ ಮತ್ತು ಭಾನುವಾರ ಮಾತ್ರ ವೈಮಾನಿಕ ಪ್ರದರ್ಶನ ತೆರೆದಿರುವುದರಿಂದ ಸಾರ್ವಜನಿಕರು ಕುಟುಂಬಸಮೇತರಾಗಿ ಭಾರೀ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಪ್ರವೇಶ ಹಂತದಲ್ಲಿ ಬಾರೀ ಗೊಂದಲ ಏರ್ಪಟ್ಟಿದೆ. ಭದ್ರತೆ ಕಟ್ಟುನಿಟ್ಟು ಮಾಡಿರುವುದರಿಂದ ಗೇಟ್ 1ರಲ್ಲಿ ಪ್ರವೇಶ ನಿರಾಕರಿಸಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಟಿಕೆಟ್ ಪಡೆಯದೆ ರಸ್ತೆಯಲ್ಲಿ ಜಮಾಯಿಸಿರುವ ಜನ ಹೊರಗಿನಿಂದಲೇ ಆಗಸದಲ್ಲಿ ಹಾರಾಡುತ್ತಿರುವ ಲೋಹದ ಹಕ್ಕಿಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ ಅಕ್ಷರಶಃ ನಿಂತಿದೆ. ರಸ್ತೆ ಮಾತ್ರವಲ್ಲ, ಸುತ್ತಮುತ್ತಲಿನ ಮನೆಗಳ ಮೇಲೂ ಜನ ನಿಂತು ವಿಮಾನಗಳ ಹಾರಾಟವನ್ನು ನೋಡುತ್ತಿದ್ದಾರೆ. ಕೆಲವೆಡೆಗಳಲ್ಲಿ ವಿದ್ಯುತ್ ಕಂಬ, ಮರಗಳನ್ನು ಕೂಡ ಏರಿ ವಿಮಾನ ವೀಕ್ಷಣೆ ಮಾಡುತ್ತಿದ್ದಾರೆ. ಏರೋ ಇಂಡಿಯಾ 2011ಗೆ ಭಾನುವಾರ ಕೊನೆಯ ದಿನವಾಗಿದೆ.