ರಾಜ್ಯಪಾಲರ ದೊಣ್ಣೆ ತಪ್ಪಿಸಲು ಸರಕಾರ ಯತ್ನ
ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಸುರೇಶ್ ಕುಮಾರ್, ಮುಖ್ಯಮಂತ್ರಿ ಮತ್ತು ಗೃಹ ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ಕೊಡಬಾರದು ಎಂದು ಸಚಿವ ಸಂಪುಟದ ನಿರ್ಧಾರಗಳನ್ನು ಲಗತ್ತಿಸಿ ರಾಜ್ಯಪಾಲರಿಗೆ ಇಂದು ಸುದೀರ್ಘ ಪತ್ರವನ್ನು ಸಹ ಬರೆಯಲಾಗಿದೆ ಎಂದರು. ಭೂಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, 1995ರಿಂದ 2010 ನವೆಂಬರ್ ವರೆಗೆ ನಡೆದಿರುವ ಭೂಹಗರಣ, ಡಿನೋಟಿಫಿಕೇಷನ್ ಹಗರಣ ಇವುಗಳ ಬಗ್ಗೆ ನ್ಯಾಯಮೂರ್ತಿ ಪದ್ಮರಾಜನ್ ಆಯೋಗವನ್ನು ನೇಮಕ ಮಾಡಲಾಗಿದೆ.
ಎರಡೆರಡು ತನಿಖೆ ನಡೆಯುತ್ತಿರುವಾಗ ಹೊಸ ಮೊಕದ್ದಮೆ ದಾಖಲಿಸಲು ಅಥವಾ ವಿಚಾರಣೆ ನಡೆಸಲು ಅನುಮತಿ ಕೊಡುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಭೂಹಗರಣವನ್ನು ಲೋಕಾಯುಕ್ತರು ತನಿಖೆ ನಡೆಸಬೇಕೆ ಅಥವಾ ಸರಕಾರದ ನೇಮಿಸಿದ ಆಯೋಗ ತನಿಖೆ ನಡೆಸಬೇಕೆ ಎಂಬ ಬಗ್ಗೆ ತಕರಾರು ಅರ್ಜಿ ರಾಜ್ಯ ಹೈಕೋರ್ಟ್ ನಲ್ಲಿದ್ದು. ಅದು ಇನ್ನೂ ಇತ್ಯರ್ಥವಾಗಿಲ್ಲ. ಹೀಗಿರುವಾಗ ಅದೇ ವಿಷಯಕ್ಕೆ ಸಂಬಂಧಿಸಿ ಹೊಸ ಮೊಕದ್ದಮೆ ದಾಖಲಿಸುವುದು ಸರಿಯಲ್ಲ ಎಂದು ಸುರೇಶ್ ಕುಮಾರ್ ವಿವರಿಸಿದರು.
ತನಿಖೆ ಪೂರ್ಣಗೊಂಡಿಲ್ಲ ಹಾಗೂ ಆರೋಪ ಸಾಬೀತಾಗಿಲ್ಲ. ದೋಷಾರೋಪಣೆಯನ್ನೂ ಸಹ ಹೊರಿಸಲಾಗಿಲ್ಲ. ಹೊಸ ಮೊಕದ್ದಮೆ ಅವಶ್ಯಕತೆ ಇಲ್ಲ. ಹೀಗಾಗಿ ಸರಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲರ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು. ಸರಕಾರದ ತೆಗೆದುಕೊಂಡಿರುವ ನಿರ್ಧಾರಕ್ಕೆ ರಾಜ್ಯಪಾಲರ ಪ್ರತಿಕ್ರಿಯೆ ತೀವ್ರ ಕುತೂಹಲಕ್ಕೆ ಎಡೆಮಾಡಿದೆ. ಇದೀಗ ಎಲ್ಲರ ದೃಷ್ಟಿ ರಾಜಭವನದ ಕಡೆಗೆ ನೆಟ್ಟಿದೆ.(ಎಚ್ ಆರ್ ಭಾರದ್ವಾಜ್)